ಶಿಗ್ಗಾವಿ: ‘ರೈತರಿಗೆ ಬೇಕಾಗಿರುವುದು ಸರ್ಕಾರದ ಸಹಾಯವಲ್ಲ. ಅವರಿಗೆ ಬೇಕಾಗರುವುದು ಉತ್ತಮ ಜ್ಞಾನ ಮತ್ತು ಮಾರ್ಗದರ್ಶನ. ಜ್ಞಾನದ ಅರಿವು ಮೂಡಿಸಿದಾಗ ಮಾತ್ರ ತಾನಾಗಿಯೇ ಕೃಷಿ ಕ್ಷೇತ್ರ ಬೆಳವಣಿ ಯಾಗಲು ಸಾಧ್ಯವಿದೆ’ ಎಂದು ರೈತ ಶಿವಪುತ್ರಪ್ಪ ಎತ್ತಿನಮನಿ ನುಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕೃಷಿ ಸಂಸ್ಕೃತಿ ಗೋಷ್ಠಿ–4ರಲ್ಲಿ ಪಾಲ್ಗೊಂಡು ‘ತೋಟಗಾರಿಕೆ ಬೆಳೆಗಳು’ ಕುರಿತು ಮಾತನಾಡಿದರು.
‘ಅನ್ನದಾತ ಬಾಂಧವರು ರಾಸಾಯನಿಕ ಪದ್ಧತಿ ಬಿಟ್ಟು ಸಾವ ಯವ ಪದ್ಧತಿಯತ್ತ ಸಾಗಬೇಕಿದೆ. ಆ ಮೂಲಕ ಅಭಿವೃದ್ಧಿ ಪಥ ತುಳಿಯಬೇಕಿದೆ’ ಎಂದರು.
ಕೃಷಿ ವಿಜ್ಞಾನಿ ಡಾ.ಎಸ್.ಎಸ್. ದೇಸಾಯಿ ಮಾತನಾಡಿ, ‘ಜಗತ್ತಿಗೆ ಮಾದರಿಯಾದ ಭಾರತೀಯ ಕೃಷಿ ಕ್ಷೇತ್ರ ಇಂದು ಋತುಮಾನಕ್ಕೆ ತಕ್ಕಂತೆ ಮಳೆ–ಬೆಳೆ ಬಾರದೆ ಕೃಷಿ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಕೇವಲ ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕದೇ ಸಾಮಾಜಿಕ ಮೂಲ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ’ ಎಂದರು.
‘ಜಾನುವಾರುಗಳೇ ಈ ಕೃಷಿ ಕ್ಷೇತ್ರದ ಪ್ರಮುಖ ಆಧಾರ ಸ್ತಂಭ. ಆದರೆ, ಕೃಷಿಯಲ್ಲಿ ಜಾನುವಾರುಗಳ ಬಳಕೆ ಕಡಿಮೆಯಾಗುತ್ತಿದೆ. ಹೀಗಾಗಿ ಕೃಷಿ ಬಲ ಕಳೆದುಕೊಳ್ಳುತ್ತಿದೆ. ಚಿಕ್ಕ ಹಿಡುವಳಿದಾರರಿಂದ ಭೂಮಿ ತುಂಡಾಗಿ ಹೊಸ ತಂತ್ರಜ್ಞಾನ ಬಳಕೆಯಲ್ಲಿ ಹಿನ್ನಡೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ಮುಂಡರಗಿಯ ಪ್ರಗತಿಪರ ರೈತ ವೈ.ಎನ್.ಗೌಡರ ‘ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು’ ಕುರಿತು ವಿಷಯ ಮಂಡಿಸಿದರು.
‘ರೈತ ಬೆನ್ನೆಲಬು ಎಂದು ಹೇಳುವ ರಾಜಕಾರಣಿಗಳಿಂದಲೇ ಆತನ ಬೆನ್ನು ಮುರಿಯುವ ಕೆಲಸ ನಡೆದಿದೆ. ಹೀಗಾಗಿ ಆತನ ಪರಿಸ್ಥಿತಿ ಸುಧಾರಿಸುತ್ತಿಲ್ಲ’ ಎಂದು ವಿಷಾದಿಸಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿದರು.
ಬಮ್ಮನಹಳ್ಳಿ ಕೃಷಿ ಅಧಿಕಾರಿ ಚನ್ನಪ್ಪ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರಾದ ರಾಮಣ್ಣ ಸಣ್ಮನಿ, ಗದಿಗೆಪ್ಪ ತಾರಿಹಾಳ, ಮೈಲಾರೆಪ್ಪ ತಳಳ್ಳಿ, ನಿಂಗಪ್ಪ ಕಮ್ಮಾರ, ರಮಾಕಾಂತ ಭಟ್ಟ, ಮೌನೇಶ ಬಡಿಗೇರ, ಈಶ್ವರಗೌಡ ಪಾಟೀಲ, ರಾಮಣ್ಣ ತಳ್ಳಳ್ಳಿ ಮತ್ತಿತರರು ಇದ್ದರು. ನಾಗರಾಜ ಅಗಡಿ ಸ್ವಾಗತಿಸಿ ದರು. ಅಶೋಕ ಹಳ್ಳಿ ನಿರೂಪಿಸಿ ದರು.ಕೆ.ಬಸಣ್ಣ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.