ಮೈಸೂರು: ‘ಸತಿಸಹಗಮನ ಪದ್ಧತಿಯು ಭಾರತದಲ್ಲಿ ಮುಸ್ಲಿಂ ದೊರೆಗಳ ಆಕ್ರಮಣದ ನಂತರ ಆರಂಭವಾಯಿತು ಎಂದು ದೊಡ್ಡ ಸಾಹಿತಿಯೊಬ್ಬರು ಹೇಳಿದ್ದಾರೆ. ಅಂದರೆ ಮಹಾಭಾರತದ ಮಾದ್ರಿಯು ಸತಿ ಸಹಗಮನ ಮಾಡಿದ್ದಕ್ಕಿಂತ ಮುಂಚೆಯೇ ಮುಸ್ಲಿಂ ದೊರೆಗಳು ಭಾರತಕ್ಕೆ ಬಂದಿದ್ದರೆ? ಮಹಾಭಾರತ ತೀರಾ ಇತ್ತೀಚಿಗಿನ ಕೃತಿಯೇ? ದೊಡ್ಡ ಸಾಹಿತಿ ಇಂಥ ಸಣ್ಣ ಸುಳ್ಳು ಹೇಳಬಾರದು’ ಎಂದು ಸಾಹಿತಿ ಬೊಳುವಾರು ಮೊಹಮ್ಮದ್ ಕುಂಞ ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ಸನ್ಮಾನ– ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹೆಸರು ಪ್ರಸ್ತಾಪಿಸದೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ನಡೆದ ಸಂವಾದದಲ್ಲಿ ನೇರವಾಗಿ ಟೀಕಾ ಪ್ರಹಾರ ನಡೆಸಿದರು.
‘ಸತಿ ಸಹಗಮನ ಪದ್ಧತಿ ಬಹಳ ಹಿಂದಿನಿಂದಲೂ ಇತ್ತು ಎಂಬುದಕ್ಕೆ ಮಹಾಭಾರತದ ಮಾದ್ರಿ ಘಟನೆ ಸಾಕ್ಷಿ. ಇಂಥ ವಿಷಯದಲ್ಲಿ ಮುಸ್ಲಿಮರ ವಿರುದ್ಧ ಕಿಡಿಕಾರುವುದರಿಂದ ಏನು ಪ್ರಯೋಜನ’ ಎಂದರು.