ಬೆಂಗಳೂರು: ‘ದೇವರ ಹೆಸರಿನಲ್ಲಿ ಜನರ ವಿಭಜನೆ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಜಾತಿ ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸ ನೀಡಿದ ಯಾದಗಿರಿ ಜಿಲ್ಲೆಯ ಉಪನ್ಯಾಸಕ ಡಾ.ಎಂ.ಎಸ್. ಸಿರವಾಳ, ‘ನಿಜಶರಣ ಅಂಬಿಗರ ಚೌಡಯ್ಯ ಅವರ 335 ವಚನಗಳು ಲಭ್ಯ ಇವೆ. ಹೆಚ್ಚಿನ ಸಂಶೋಧನೆ ನಡೆಸಿದರೆ ಅವರ ಸಾವಿರಾರು ವಚನಗಳು ಸಿಗಲಿವೆ’ ಎಂದು ಅಭಿಪ್ರಾಯಪಟ್ಟರು.
‘ಸಮಾಜದಲ್ಲಿನ ಡಾಂಭಿಕ ಜೀವನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನೇರವಾಗಿ ಖಂಡಿಸಿ ವಚನಗಳ ಮೂಲಕ ಸತ್ಯದರ್ಶನ ಮಾಡಿಸಿದ ಅಂಬಿಗರ ಚೌಡಯ್ಯ ನಿಷ್ಠುರವಾದಿ ಶರಣರಾಗಿದ್ದರು’ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ‘ವ್ಯವಸ್ಥೆಯನ್ನು ಅಂದು ನೇರವಾಗಿ ಖಂಡಿಸುವುದೇ ಕಷ್ಟವಾಗಿತ್ತು. ಅಂತಹ ಸಮಯದಲ್ಲಿ ಅಂಬಿಗರ ಚೌಡಯ್ಯ ಸೈದ್ಧಾಂತಿಕ ನಿಲುವಿನೊಂದಿಗೆ ನಿಷ್ಠುರವಾಗಿ ಮಾತನಾಡುತ್ತಿದ್ದರು. ಹೀಗಾಗಿ ಅವರು ಸತ್ಯನಿಷ್ಠ ಶರಣರು’ ಎಂದರು.
‘ಅಂಬಿಗರ ಚೌಡಯ್ಯ ಅವರ ವಚನಗಳು ಬೆಂಕಿಯ ಉಂಡೆಗಳು. ಅವರ ವಚನಗಳು ಈಗಲೂ ಪ್ರಸ್ತುತ’ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಸ್ವಾತಂತ್ರ್ಯ ಉದ್ಯಾನದಿಂದ ರವೀಂದ್ರ ಕಲಾಕ್ಷೇತ್ರದ ವರೆಗೆ ಜನಪದ ಕಲಾತಂಡಗಳ ಮೆರವಣಿಗೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.