ಬೆಂಗಳೂರು: ನಾಗರಬಾವಿ 2ನೇ ಹಂತದ ಕೊಟ್ಟಿಗೆಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ₹50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.
ರಸ್ತೆಗಳ ಡಾಂಬರು ಕಿತ್ತು ಹೋಗಿದೆ. ರಸ್ತೆಯಲ್ಲಿನ ಹೊಂಡಗಳಿಂದಾಗಿ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ಹಲವು ಬ್ಲಾಕ್ಗಳಲ್ಲಿ ಒಳಚರಂಡಿ ವ್ಯವಸ್ಥೆ ತೀರ ಹದಗೆಟ್ಟಿದೆ ಎಂಬುದು ನಿವಾಸಿಗಳ ದೂರಾಗಿತ್ತು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲು ಕಾಮಗಾರಿ ಕೈಗೊಂಡಿದೆ. ‘ಡಾಂಬರೀಕರಣದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಸುಸಜ್ಜಿತವಾದ ಪಾದಾಚಾರಿ ಮಾರ್ಗ ನಿರ್ಮಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮುಂದಿನ ಯೋಜನೆ ಏನು?: ‘ವಾರ್ಡ್ನಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗುತ್ತದೆ. 16 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸ ಲಾಗುತ್ತದೆ. ಹನುಮಗಿರಿ ದೇವಸ್ಥಾನ ವನ್ನು ₹ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತೇವೆ’ ಎಂದು ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.
**
ವೃಷಭಾವತಿಗೆ ಚರಂಡಿ ನೀರು ಬಿಡಬೇಡಿ
‘ವೃಷಭಾವತಿ ನದಿಗೆ ಚರಂಡಿ ನೀರು ಬಿಡುತ್ತಿರುವುದರಿಂದ ದುರ್ವಾಸನೆ ಹೆಚ್ಚಾಗುತ್ತಿದೆ. ನದಿಯ ಸುತ್ತಮುತ್ತ ವಾಸಿಸುವ ಜನರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಮಹಿಳೆಯೊಬ್ಬರು ದೂರಿದರು.
‘ಕೊಳಚೆ ನೀರನ್ನು ಶುದ್ಧೀಕರಿಸಿ ಕಾಲುವೆಗೆ ಬಿಡಲಾಗುವುದು. ಇದಕ್ಕಾಗಿ ಎಂಟು ಕಡೆ ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗುವುದು’ ಎಂದು ಸಚಿವ ಕೆ.ಜೆ. ಜಾರ್ಜ್ ಅವರು ಪ್ರತಿಕ್ರಿಯಿಸಿದರು.
**
ಗಾರ್ಡನ್ ಸಿಟಿ ಎಂದೇ ಹೆಸರಾಗಿದ್ದ ಬೆಂಗಳೂರಿಗೆ ಹಿಂದಿನ ಸರ್ಕಾರ ಗಾರ್ಬೇಜ್ ಸಿಟಿ ಎಂಬ ಕಳಂಕ ಹಚ್ಚಿತು. ಈಗಿನ ಸರ್ಕಾರ ಹಂತ ಹಂತವಾಗಿ ನಗರವನ್ನು ಅಭಿವೃದ್ಧಿಗೊಳಿಸುತ್ತಿದೆ.
– ಕೆ.ಜೆ.ಜಾರ್ಜ್ ಸಚಿವ