ಹಿರಿಯಡಕ: ಉಡುಪಿ ತಾಲ್ಲೂಕಿನ ಮಲ್ಪೆ– ಉಡುಪಿ– ಕಾರ್ಕಳ ರಸ್ತೆಯ ಹಿರಿಯಡಕ ಪೇಟೆಯಿಂದ ಗುಡ್ಡೆಯಂಗಡಿ ವರೆಗಿನ ಸುಮಾರು 1.5 ಕಿ.ಮೀ ಉದ್ದದ ರಸ್ತೆಯ ವಿಸ್ತರಣಾ ಕಾಮಗಾರಿಗೆ ಶಾಸಕ ವಿನಯಕುಮಾರ್ ಸೊರಕೆ ಸೋಮವಾರ ಹಿರಿಯಡಕದಲ್ಲಿ ಭೂಮಿಪೂಜೆ ನೆರವೇರಿಸಿದರು. ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಡುಪಿ ವಿಭಾಗ ಇದರ ಮುಖಾಂತರ ₹ 2.60 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಲಿದೆ.
ಬಳಿಕ ಶಾಸಕರು ಮಾತನಾಡಿ ‘ಹಿರಿಯಡಕ ಪೇಟೆ ಶಿವಮೊಗ್ಗ, ಚಿಕ್ಕಮಗಳೂರು, ಧರ್ಮಸ್ಥಳ, ಕಾರ್ಕಳ ಸೇರಿದಂತೆ ಇನ್ನಿತರ ಊರುಗಳಿಗೆ ಸಂಪರ್ಕ ಕೊಂಡಿಯಾಗಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಪು ಅಭಿವೃದ್ಧಿ ಹೊಂದಿರುವಂತೆ ಹಿರಿಯಡಕವೂ ಅಭಿವೃದ್ಧಿಯಾಗಬೇಕು. ಆ ಕಾರಣದಿಂದ ಹಿರಿಯಡಕಕ್ಕೆ ಅವಶ್ಯವಿರುವ ಚರಂಡಿ ವ್ಯವಸ್ಥೆ, ಸುಸಜ್ಜಿತ ಬಸ್ ನಿಲ್ದಾಣ, ಶೌಚಾಲಯ ನಿರ್ಮಾಣದ ನೀಲ ನಕ್ಷೆ ಯನ್ನು ಸಿದ್ಧಪಡಿಸಲಾಗಿದೆ’ ಎಂದರು.
‘ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದ ರ್ಜೆಗೇರಿದ ಮಲ್ಪೆ–ತೀರ್ಥಹಳ್ಳಿಯ ಹಿರಿಯಡಕ–ಪರ್ಕಳ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯ ರ್ರೊಂದಿಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಬೊಮ್ಮರಬೆಟ್ಟು, ಆತ್ರಾಡಿ, ಕೊಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 6.45 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈಗಾಗಲೇ ಶಿಲಾನ್ಯಾಸ ನೆರವೇರಿಸ ಲಾಗಿದೆ. ಅದರೊಂದಿಗೆ ಬಜೆ–ಕುಕ್ಕೆಹಳ್ಳಿ ಮತ್ತು ಪರೀಕ–ಬೆಳ್ಳಂಪಳ್ಳಿ ಸೇತುವೆಗೆ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿದೆ. 1 ವಾರದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ 26 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ₹ 28 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಲಾಗಿದೆ’ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ಚಂದ್ರಿಕಾ ಕೇಲ್ಕರ್, ತಾಲ್ಲೂಕು ಪಂಚಾ ಯಿತಿ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಧೀರ್ ಹೆಗ್ಡೆ, ಬೊಮ್ಮರಬೆಟ್ಟು ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಮಾಲತಿ ಆಚಾರ್ಯ, ಉಪಾಧ್ಯಕ್ಷ ಚಂದ್ರಶೇಖರ್, ಕೊಡಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಪೂಜಾರಿ, ಗುತ್ತಿಗೆದಾರ ವಾದಿರಾಜ್ ಶೆಟ್ಟಿ, ಉದ್ಯಮಿ ರಾಜರಾಮ್, ಲೋಕೋಪಯೋಗಿ ಇಲಾಖೆಯ ಡಿ.ವಿ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.