ಬೀದರ್: ದೇಸಿಯ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಹೇಳಿದರು.
ನಗರದ ಜಿಲ್ಲಾ ರಂಗ ಮಂದಿರದಲ್ಲಿ ನೂಪುರ ನೃತ್ಯ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ ನೂಪುರ ನೃತ್ಯೋತ್ಸವಕ್ಕೆ ಡೊಳ್ಳು ಬಾರಿಸುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.
ಬೀದರ್ ಜಿಲ್ಲೆ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಬೇಕು. ಕಲಾವಿದರು ಹಾಗೂ ಸಾಹಿತಿಗಳು ಈ ದಿಸೆಯಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು.
ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಳಚಿ ಹಾಕಿ ಬೆಂಗಳೂರಿನ ಜನ ಬೀದರ್ ಜಿಲ್ಲೆಯನ್ನು ಗುರುತಿಸವಂತೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ ಒಬ್ಬ ಅಧಿಕಾರಿ ಇಲ್ಲದಿರುವುದು ದುರ್ದೈವದ ಸಂಗತಿ. ಇಂತಹ ಕಾರ್ಯಕ್ರಮಗಳಲ್ಲಿ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಕಲಾವಿದರಿಗೆ ಉತ್ತೇಜನ ನೀಡಬೇಕು ಎಂದರು.
ಗುರುಪಾದಪ್ಪ ನಾಗಮಾರಪಳ್ಳಿ ಸುಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಕಲೆ ಹಾಗೂ ಸಾಹಿತ್ಯವನ್ನು ಪೋಷಿಸುತ್ತಿರುವ ಸಂಸ್ಥೆ ಹಾಗೂ ಅಕಾಡೆಮಿಗಳನ್ನು ಗುರುತಿಸಿ ಸರ್ಕಾರ ಅವುಗಳಿಗೆ ಹಣಕಾಸಿನ ನೆರವು ಕಲ್ಪಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ, ಜಗಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸ್ವರ್ಣ ಉಡುಪ, ಮಹಾಮಂಗಲೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿಯ ಸಂಚಾಲಕ ಮುರಳೀಧರ ನಕ್ಷತ್ರಿ, ಅಕಾಡೆಮಿಯ ಮುಖ್ಯಸ್ಥೆ ಉಷಾ ಪ್ರಭಾಕರ, ಹೋಟೆಲ್ ಉದ್ಯಮಿ ಪ್ರಭಾಕರ ಉಪಸ್ಥಿತರಿದ್ದರು.
ನೃತ್ಯೋತ್ಸವದಲ್ಲಿ ಭರತನಾಟ್ಯ, ಜಾನಪದ, ವಚನ ನೃತ್ಯ ಪ್ರದರ್ಶಿಸಲಾಯಿತು.
ಉಷಾ ಪ್ರಭಾರ ನೇತೃತ್ವದಲ್ಲಿ ಸುಮಾರು 86 ನೃತ್ಯಪಟುಗಳು ಸಾಮೂಹಿಕ ನೃತ್ಯ ಪ್ರದರ್ಶನ ಹಾಗೂ ಯಕ್ಷಗಾನ ಶೈಲಿಯ 25 ನಿಮಿಷದ ಭಸ್ಮಾಸುರ ಮೋಹಿನಿ ರೂಪಕ ಪ್ರೇಕ್ಷಕರ ಗಮನ ಸೆಳೆಯಿತು. ಸುಬ್ರಹ್ಮಣ್ಯ ಪ್ರಭು ನಿರೂಪಿಸಿದರು. ಅನನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.