ಬೆಂಗಳೂರು: ಕರ್ನಾಟಕ ಹೈಕೋರ್ಟ್ ಕಂಬಳ ಪ್ರಕರಣದ ಅರ್ಜಿಯನ್ನು ಕಾಯ್ದಿರಿಸಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ‘ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಿದ್ದು, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿರುವ ತಮಿಳುನಾಡಿನ ‘ಜಲ್ಲಿಕಟ್ಟು ವಿವಾದ’ ತೀರ್ಪನ್ನು ಅವಲೋಕಿಸಿ, ಕಂಬಳ ಪ್ರಕರಣದ ವಿಚಾರಣೆಯನ್ನು ಆರಂಭಿಸಲಾಗುವುದು' ಎಂದು ತಿಳಿಸಿದೆ.
ಕಂಬಳ ಆಚರಣೆ ವಿರುದ್ಧ ಹೇರಲಾಗಿದ್ದ ಮಧ್ಯಂತರ ತಡೆ ಕ್ರಮವನ್ನು ಪ್ರಶ್ನಿಸಿ, ಉಡುಪಿ ಜಿಲ್ಲಾ ಕಂಬಳ ಸಮಿತಿ ಮತ್ತು ದಕ್ಷಿಣ ಕನ್ನಡದ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ನವೆಂಬರ್ 22, 2016ರಂದು ಕೋರ್ಟ್ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
‘ಕಂಬಳ ಕ್ರೀಡೆಯನ್ನು ತಮಿಳುನಾಡಿನ ಜಲ್ಲಿಕಟ್ಟು ಆಚರಣೆಯೊಂದಿಗೆ ಹೋಲಿಸಿ ನೋಡುತ್ತಿರುವುದರಲ್ಲಿ ಅರ್ಥವಿಲ್ಲ. ಅಗತ್ಯವಿದ್ದರೆ ರಾಜ್ಯ ಸರ್ಕಾರ ಕಂಬಳ ಆಚರಣೆಯ ಮೇಲ್ವಿಚಾರಣೆಗಾಗಿ ಸಾಂವಿಧಾನಿಕ ಸಮಿತಿಯೊಂದನ್ನು ರಚಿಸಲಿ. ನಾವು ಅದರ ನಿರ್ದೇಶನದಂತೆ ಕ್ರೀಡೆ ಆಯೋಜಿಸಲು ಸಿದ್ಧ’ ಎಂದು ಸ್ಪರ್ಧೆಯ ಆಯೋಜಕರು ವಾದಿಸಿದರು.
ಈ ಹಿಂದೆ ಪ್ರಾಣಿ ದಯಾ ಸಂಘಟನೆ (ಪೇಟಾ) ಕಂಬಳ ಕ್ರೀಡೆಯನ್ನು ರದ್ದು ಪಡಿಸುವಂತೆ ಕೋರ್ಟ್ನಲ್ಲಿ ದಾವೆ ಹೂಡಿತ್ತು.