ಆಲಮಟ್ಟಿ(ನಿಡಗುಂದಿ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಲಮಟ್ಟಿ ಘಟಕದ ವತಿಯಿಂದ ಸರ್ಕಾರಿ ನೌಕರರಿಗೆ ಎರಡು ದಿನಗಳ ವಿವಿಧ ವಿಷಯದ ತರಬೇತಿ ಕಾರ್ಯಾಗಾರ ಇಲ್ಲಿಯ ಸಮುದಾಯ ಭವನದಲ್ಲಿ ನಡೆಯಿತು.
ಬೆಂಗಳೂರು ಮೂಲದ ನೌಕರರ ತರಬೇತಿ ಸಂಸ್ಥೆ ನಿವೃತ್ತ ಪ್ರಾಚಾರ್ಯ ಮಲ್ಲೇಶ್ವರಪ್ಪ, ಮೈಸೂರಿನ ನಿವೃತ್ತ ಖಜಾನಾಧಿಕಾರಿಗಳಾದ ಡಿ. ರವೀಂದ್ರ ನಾಥ, ಕೆ.ಟಿ. ವಿಜಯ ಕೃಷ್ಣಕುಮಾರ್, ನಿವೃತ್ತ ಉಪ ಕಾರ್ಯದರ್ಶಿ ದೇವರಾಜು ಅವರು ಮಾಹಿತಿ ಹಕ್ಕು ಅಧಿನಿಯಮ 2015, ಕರ್ನಾಟಕ ಸಿವಿಲ್ ಸೇವಾ ನಿಯಮಗಳು, ಕರ್ನಾಟಕ ನಾಗರಿಕ ಸೇವಾ ನಿಯಮಗಳು, ನೂತನ ಪಿಂಚಣಿ ಯೋಜನೆ, ನೇಮಕಾತಿ ನಿಯಮಗಳು, ನಿವೃತ್ತಿ ವೇತನ ಮತ್ತು ನಿವೃತ್ತಿ ವೇತನ ಸೌಲಭ್ಯ ಬಗ್ಗೆ ಉಪನ್ಯಾಸ ನೀಡಿದರು.
ಕ್ಯಾಲೆಂಡರ್ ಬಿಡುಗಡೆ: ಆಲಮಟ್ಟಿಯ ನೌಕರರ ಸಂಘ ಕಳೆದ ವರ್ಷ ಮಾಡಿದ ವಿವಿಧ ಸಾಧನೆಗಳ ಸಾಧನಾ ಕಿರುಹೊತ್ತಿಗೆ ಹಾಗೂ ಪ್ರಸಕ್ತ ವರ್ಷದ ಕ್ಯಾಲೆಂಡರ್ನ್ನು ಶನಿವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಎಂಜಿನಿಯರ್ ಎಸ್.ಎಚ್. ಮಂಜಪ್ಪ ಬಿಡುಗಡೆ ಮಾಡಿದರು.
ಸಹಾಯಕ ಎಂಜಿನಿಯರ್ ವಿ.ಜಿ. ಕುಲಕರ್ಣಿ ಮಾತನಾಡಿ, ಬದಲಾಗುತ್ತಿ ರುವ ವಿವಿಧ ಸೇವಾನಿಯಮಗಳನ್ನು ನೌಕರರು ಅರಿಯಲು ಈ ರೀತಿಯ ತರಬೇತಿಯ ಅಗತ್ಯವಿತ್ತು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಚಾಲಕ ಜಿ.ಸಿ. ಮುತ್ತಲದಿನ್ನಿ ಮಾತನಾಡಿದರು.
ಉಪಮುಖ್ಯ ಎಂಜಿನಿಯರ್ ಶಶಿಕಾಂತ ಹೊನವಾಡಕರ, ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ಎಸ್. ಪಾಟೀಲ, ಎಂ.ಎಂ. ಲಕ್ಕುಂಡಿ, ಡಾ ರತ್ನಾಕರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಅಜೀಮ್ ನಕೀಬ್, ಯಶವಂತ ಮರಡಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಂ. ಪಾತ್ರೋಟ , ಎಚ್.ಎಚ್. ದೊಡಮನಿ, ಸೋಮಲಿಂಗ ಬಿದರಿ ಇದ್ದರು.