ಗದಗ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡುಗೆಯೇನೂ ಲಭಿಸಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಹೆಚ್ಚಿಸಿರುವುದು, ಬರಪಿಡೀತ ಗದಗ ಜಿಲ್ಲೆಗೆ ಒಂದಿಷ್ಟು ಸಹಾಯ ಆಗಬಹುದು. ಪ್ರಮುಖ ರೈಲ್ವೆ ಜಂಕ್ಷನ್ ಹೊಂದಿರುವ ಗದುಗಿಗೆ, ಈ ಬಾರಿ ಒಂದಿಷ್ಟು ಕೊಡುಗೆಗಳು ಲಭಿಸಬಹುದು ಎಂಬ ನಿರೀಕ್ಷೆಯಲ್ಲಿ ರೈಲ್ವೆ ಹೋರಾಟಗಾರರಿದ್ದರು. ಆದರೆ, ಈ ನಿರೀಕ್ಷೆ ಕನಸಾಗಿಯೇ ಉಳಿದಿದೆ.
ಸಾಮಾನ್ಯ ಬಜೆಟ್ನಲ್ಲಿ ರೈಲ್ವೆ ಬಜೆಟ್ ವಿಲಿನಗೊಳಿಸಿರುವುದರಿಂದ ರೈಲು ಅಭಿವೃದ್ಧಿಗೆ ಸಂಬಂಧಿಸಿದಂತೆ ಘೋಷಣೆಯಾದ ವಿವರಗಳನ್ನು ತಿಳಿದುಕೊಳ್ಳುವುದೇ ಜನಸಾಮಾನ್ಯರಿಗೆ ತೊಂದರೆ ಯಾಗಿದೆ. ಪ್ರಸಕ್ತ ಬಜೆಟ್ನಲ್ಲಿ ಗದಗ ರೈಲ್ವೆ ವಿಭಾಗಕ್ಕೆ ಸಂಬಂಧಿಸಿದಂತೆ ಯಾವುದೇ ಘೋಷಣೆ ಆಗಿಲ್ಲ. ಇದೊಂದು ನಿರಾಶದಾಯಕ ಬಜೆಟ್ ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ ಬ್ಯಾಳಿ ಹೇಳಿದ್ದಾರೆ.
ಬಹುದಿನಗಳಿಂದ ಹೊಸ ರೈಲುಗಳು, ಹೊಸ ರೈಲು ಮಾರ್ಗಗಳು ಹಾಗೂ ವಿದ್ಯುತ್ತಿಕರಣ ರೈಲು ಮಾರ್ಗಗಳು ಈ ಮುಂಗಡ ಪತ್ರದಲ್ಲಿ ಘೋಷಣೆಯಾಗಬಹುದೆಂದು ಬಹಳಷ್ಟು ಆಶಯದಿಂದ ನಿರೀಕ್ಷಿಸಲಾಗಿತ್ತು. ಆದರೆ ಬಜೆಟ್ ಗಮನಿಸಿದಾಗ ಒಟ್ಟು ಮೂರೂವರೆ ಸಾವಿರ ಹೊಸ ರೈಲು ಮಾರ್ಗಗಳು ಮತ್ತು 500 ರೈಲು ನಿಲ್ದಾಣಗಳಲ್ಲಿ ಲಿಪ್ಟ್ ಮತ್ತು ಎಸ್ಕಲೇಟರ್ ಅಳವಡಿಕೆಗೆ ಘೋಷಣೆಯಾಗಿದೆ. ಆದರೆ, ಈ ಘೋಷಣೆ ಗದಗ ರೈಲು ನಿಲ್ದಾಣಕ್ಕ ಇದೆಯೋ, ಇಲ್ಲವೋ ಸ್ಪಷ್ಟವಾಗಿಲ್ಲ. ಇದ್ದರೆ, ತುಸು ಸಮಾಧಾನಕರ. ಕೇವಲ ಒಂದೇ ಒಂದು ತೇಜಸ್ ಎಕ್ಸಪ್ರೆಸ್ ಗಾಡಿಯನ್ನು ಉತ್ತರ ಭಾರತದಲ್ಲಿ ಓಡಿಸಲು ಘೋಷಣೆಯಾಗಿದೆ. ಅದನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಹೊಸ ಗಾಡಿಗಳನ್ನು ಓಡಿಸಲು ಬಜೆಟ್ನಲ್ಲಿ ಘೋಷಿಸಿಲ್ಲ. ಇದರಿಂದಾಗಿ ನಮ್ಮ ಭಾಗಕ್ಕೆ ಹೊಸ ಗಾಡಿಗಳ ಬಗ್ಗೆ ಇಟ್ಟ ಕನಸು ಕೇವಲ ಕನಸಾಗಿಯೇ ಉಳಿದಿದೆ ಎಂದು ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
7 ಸಾವಿರ ನಿಲ್ದಾಣಗಳಿಗೆ ಸೌರಶಕ್ತಿ ಅಳವಡಿಸಲು ಘೋಷಣೆಯಾಗಿದ್ದು ಅದರಲ್ಲಿ ನಮ್ಮ ಗದಗ ನಿಲ್ದಾಣ ಇದೆಯೇ ಎನ್ನುವುದು ತಿಳಿದಿಲ್ಲ. ಗದಗ ರೈಲ್ವೆ ನಿಲ್ದಾಣ ವಿಶ್ವದರ್ಜೆಗೇರಿಸುವುದು ಮತ್ತು ಕರ್ನಾಟಕಕ್ಕೆ ಯಾವುದೇ ಹೊಸ ಗಾಡಿಗಳು ಘೋಷಣೆಯಾಗದಿರುವುದು, ಪ್ರಾದೇಶಿಕ ಭಾಷೆಗಳಲ್ಲಿ ಟಿಕೆಟ್ ವಿತರಣೆ ಪ್ರಸ್ತಾಪವಾಗದೇ ಇರುವುದು ನಿರಾಸೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಸ್ವಾಗತಾರ್ಹ: ನೋಟು ರದ್ದತಿ ನಂತರ, ದೇಶದ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿಯ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಇದು ಐತಿಹಾಸಿಕ ಹಾಗೂ ಸ್ವಾಗತಾರ್ಹ ಬಜೆಟ್ ಎಂದು ಬಿಜೆಪಿಯ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ.ಹಿರೇಮಠ ಹೇಳಿದ್ದಾರೆ.
ಕೃಷಿ ಸಾಲಕ್ಕೆ ₹10 ಲಕ್ಷ ಕೋಟಿ ಮೀಸಲು ಸೇರಿದಂತೆ ಸಣ್ಣ, ಮದ್ಯಮದ ರೈತರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕಲು ವಿಶೇಷ ಪ್ರಯತ್ನ ನಡೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಬುಧವಾರ ಮಂಡಿಸಿದ ಬಜೆಟ್ನಿಂದ ರಾಜ್ಯಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ಕಳೆದ ಕೆಲ ವರ್ಷಗಳಿಂದ ಬರಗಾಲ ದಿಂದ ತತ್ತರಿಸಿ ಹೋಗಿದ್ದ ರೈತ ಸಮು ದಾಯ ಸಾಲವನ್ನು ಮನ್ನಾ ಮಾಡಿಲ್ಲ. ರೈತಪರ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ ಕೆಜೆಪಿಯ ಸಯ್ಯದ ಖಾಲೀದ ಕೊಪ್ಪಳ ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.