ಕವಿತಾಳ: ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಕಡಿಮೆ ಮಾಡಿ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮಿ ಹೇಳಿದರು.
ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿ ಮತ್ತು ಗರ್ಭಿಣಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ರಾಜ್ಯ ಸರ್ಕಾರದ ನೂತನ ‘ಮಾತೃಪೂರ್ಣ ಯೋಜನೆಗೆ’ ಗುರು ವಾರ ಚಾಲನೆ ನೀಡಿ ಮಾತನಾಡಿದರು.
ಬಾಣಂತಿ ಮತ್ತು ಗರ್ಭಿಣಿಯರಿಗೆ ಇದುವರೆಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತಿತ್ತು. ಕುಟುಂಬದ ಇತರ ಸದಸ್ಯರು ಆಹಾರಧಾನ್ಯಗಳನ್ನು ಬಳಕೆ ಮಾಡುವುದರಿಂದ ಫಲಾನುಭವಿಗಳಿಗೆ ಅಗತ್ಯ ಪೌಷ್ಟಿಕ ಆಹಾರದ ಕೊರತೆಯಾಗುತ್ತಿದೆ. ಅಂಗನವಾಡಿಗಳಲ್ಲಿ ಪ್ರತಿದಿನ ಬಿಸಿಯೂಟ ನೀಡಲಾಗುತ್ತದೆ ಎಂದರು.
ಮೊಟ್ಟೆ, ಮೊಳಕೆ ಕಾಳು, ಬೇಯಿಸಿದ ತರಕಾರಿ, ಅನ್ನ, ಸಾಂಬಾರು ಮತ್ತು ಹಾಲು ನೀಡಲಾಗುತ್ತಿದ್ದು, ಊಟದ ಸಮಯಕ್ಕೆ ಕೇಂದ್ರಕ್ಕೆ ಬಂದು ಊಟ ಮಾಡಲು ಮನವಿ ಮಾಡಿದರು.
‘ಹಲವು ಅಂಗನವಾಡಿ ಕೇಂದ್ರ ಗಳಿಗೆ ಸ್ವಂತ ಕಟ್ಟಡವಿಲ್ಲ. ಇಕ್ಕಟ್ಟಾದ ಜಾಗದಲ್ಲಿ ಕೂರಿಸಲಾಗುತ್ತಿದೆ. ಮಕ್ಕ ಳನ್ನು ಸಂಬಾಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಹೆಣಗುತ್ತಿರುವ ಕಾರ್ಯಕರ್ತೆಯರಿಗೆ ಬಾಣಂತಿ ಮತ್ತು ಗರ್ಭಿಣಿಯರಿಗೆ ಬಿಸಿಯೂಟ ನೀಡು ವುದು ಹೊರೆಯಾಗಲಿದೆ. ಇದೊಂದು ಅರ್ಥಹೀನ ಯೋಜನೆ. ಆಹಾರ ಧಾನ್ಯಗಳನ್ನು ನೀಡುವುದು ಉತ್ತಮ’ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಎಡಿಎಂ ಅಕ್ಬರ್, ಮೌನೇಶ ನಾಯಕ ಮತ್ತು ಮುಖಂಡರಾದ ಶಶಿಧರ ಭಾವಿಕಟ್ಟಿ ಮತ್ತು ವಿರೂಪಾಕ್ಷಿ ಹಡಪದ ಆಗ್ರಹಿಸಿದರು. ನಿರ್ಮಲ, ಜಾನಕಿಬಾಯಿ, ಹುಸೇನಮ್ಮ, ಶಶಿಕಲಾ, ಕಮಲಾಬಾಯಿ, ಹುಚ್ಚಮ್ಮ, ಕಮಲಮ್ಮ, ಗಂಗಮ್ಮ ಇದ್ದರು.