ಉಡುಪಿ: ತುಳುವರೆಲ್ಲರೂ ಮನೆಯಲ್ಲಿ ತುಳು ಭಾಷೆಯನ್ನೇ ಮಾತನಾಡುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಬೇಕು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ತುಳುಕೂಟ ನಗರದ ಜಗನ್ನಾಥ ಸಭಾ ಭವನದಲ್ಲಿ ಏರ್ಪಡಿಸಿದ್ದ 22ನೇ ವರ್ಷದ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳುಗೀತೆ ಗಾಯನ ಸ್ಪರ್ಧೆಯ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಸ್ವೀಕರಿಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಎಸ್ಎಸ್ ಎಲ್ಸಿ ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಯುವ ಜನಾಂಗಕ್ಕೆ ತುಳುಭಾಷೆಯ ಮೇಲೆ ಇರುವ ಅಭಿಮಾನಕ್ಕೆ ಇದು ಸಾಕ್ಷಿ ಎಂದರು.
ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನದ ವೀಣಾ ಎಂ.ಸಾಮಗ ಮಾತನಾಡಿ, ತುಳುಗೀತೆ ಗಾಯನ ಕಾರ್ಯಕ್ರಮದ ಮೂಲಕ ತುಳುನಾಡಿನ ಹಿರಿಯ ತುಳು ಸಾಹಿತಿಗಳಿಗೆ ನುಡಿನಮನ ಸಲ್ಲಿಸುತ್ತಿರುವುದು ಸಂತೋಷ ವಿಷಯ. ಸಮೃದ್ಧವಾಗಿರುವ ತುಳು ಭಾಷೆ ಶೀಘ್ರವಾಗಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲಿ ಎಂದರು.
ಜಿಲ್ಲಾ ಲಯನೆಸ್ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕಿ ವತ್ಸಲಾ ಕರ್ಕೇರ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ತುಳುಕೂಟದ ಉಪಾಧ್ಯಕ್ಷರಾದ ಮಹಮ್ಮದ್ ಮೌಲಾ, ಯಶೋಧ ಕೇಶವ್, ಕೋಶಾಧಿಕಾರಿ ಎಂ.ಜಿ.ಚೈತನ್ಯ, ಯು.ಜೆ.ದೇವಾಡಿಗ ಉಪಸ್ಥಿತರಿದ್ದರು.
ತುಳುಗೀತೆಗಾಯನ ಸ್ಪರ್ಧೆಯ ಸಂಚಾಲಕ ವಿವೇಕಾನಂದ ಎನ್. ಸ್ವಾಗತಿ ಸಿದರು. ಉಪನ್ಯಾಸಕರಾದ ನಾಗರಾಜ್ ಜಿ.ಎಸ್, ದಯಾನಂದ್, ವಿ.ಕೆ.ಯಾದವ್ ಕಾರ್ಯಕ್ರಮ ನಿರೂಪಿಸಿದರು. ತುಳುಕೂಟದ ಕಾರ್ಯದರ್ಶಿ ಗಂಗಾ ಧರ್ ಕಿದಿಯೂರು ವಂದಿಸಿದರು.