ಕಂಪ್ಲಿ: ಸಮೀಪದ ಬೆಳಗೋಡುಹಾಳು ಗ್ರಾಮದ ಬಳಿಯ ಹೂಳು ತುಂಬಿರುವ ವಿಜಯನಗರ ಕಾಲುವೆ ದುರಸ್ತಿಗೆ ಶಾಸಕ ಟಿ.ಎಚ್. ಸುರೇಶ್ಬಾಬು ಅವರು ವೈಯಕ್ತಿಕವಾಗಿ ₹ 5 ಲಕ್ಷ ನೀಡಿದ್ದು, ಕಾಲುವೆ ಹೂಳು ತೆಗೆಯುವ ಕಾಮಗಾರಿಗೆ ಬಿಜೆಪಿ ಕಾರ್ಯಕರ್ತರು ಭಾನುವಾರ ಚಾಲನೆ ನೀಡಿದರು.
ಹಲವು ತಿಂಗಳಿಂದ ಕಾಲುವೆಯಲ್ಲಿ ಗಿಡ, ಜಲಸಸ್ಯ ಬೆಳೆದು ಜೊತೆಗೆ ಹೂಳು ತುಂಬಿ ನೀರು ಸರಾಗವಾಗಿ ಹರಿಯದೆ ರೈತರು ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಕೆಲ ರೈತರು ಶಾಸಕರಿಗೆ ಮನವಿ ಮಾಡಿದ್ದರು. ಸರ್ಕಾರದ ಅನುದಾನ ನಿರೀಕ್ಷೆ ಮಾಡುವುದು ಬೇಡ ಎಂದು ತಮ್ಮ ಸ್ವಂತ ಖರ್ಚು ಭರಿಸಿ ಕಾಲುವೆ ಹೂಳು ತೆಗೆಯುವ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ.
ತುಂಗಭದ್ರಾ ಮುಖ್ಯ ಅಣೆಕಟ್ಟು ಸ್ಥಳದಿಂದ ಕಾಲುವೆ ಮುಕ್ತಾಯದವರೆಗೆ ಸುಮಾರು 14 ಕಿ.ಮೀ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಇದರಿಂದ ಕಂಪ್ಲಿ, ಕೋಟೆ, ಬೆಳೆಗೋಡುಹಾಳು, ಸಣಾಪುರ ವ್ಯಾಪ್ತಿಯ ಸುಮಾರು 750 ಎಕರೆ ಭೂಮಿಗೆ ಸಕಾಲಕ್ಕೆ ನೀರು ದೊರೆಯಲಿದೆ ಎಂದು ಬಿಜೆಪಿ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಬ್ರಹ್ಮಯ್ಯ, ಕ್ಷೇತ್ರ ಉಪಾಧ್ಯಕ್ಷ ಬಿ. ಸಿದ್ದಪ್ಪ ಭಾನುವಾರ ಮಾಹಿತಿ ನೀಡಿದರು.
ಪುರಸಭೆ ಸದಸ್ಯರಾದ ಎಸ್. ರಾಘವೇಂದ್ರ, ಸಣ್ಣ ಹುಲುಗಪ್ಪ, ಮುಖಂಡರಾದ ಜಿ. ಸುಧಾಕರ, ಕೊಡಿದಲ ರಾಜು, ಜಿ. ರಾಮಣ್ಣ, ಬಿ. ದೇವೇಂದ್ರ, ಬಿ. ನಾಗೇಂದ್ರ, ಕಂಬತ್ ರಮೇಶ್, ಶೆರೆಗಾರ ಕೃಷ್ಣ, ಹೆಬ್ಬಾಳ ಚಂದ್ರ, ಎಂ. ಅಶೋಕ್, ಬಾಗಲಿ ಮಂಜುನಾಥ, ಗೋಪಾಲ, ಭಾಸ್ಕರರೆಡ್ಡಿ, ಇಮಾಮ್ಸಾಬ್, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.