ದೇವನಹಳ್ಳಿ : ಪಟ್ಟಣದ ಪುಟ್ಟಪ್ಪನ ಬೀದಿ ಚನ್ನರಾಯಪಟ್ಟಣ ರಸ್ತೆ ಪಕ್ಕದಲ್ಲಿರುವ ಸಾರ್ವಜನಿಕರ ಸ್ಮಶಾನದ ಭೂಮಿ ಒತ್ತುವರಿ ತೆರವುಗೊಳಿಸಲು ಭೂ ಮಾಪನ ಇಲಾಖೆ ವತಿಯಿಂದ ಅಳತೆ ಕಾರ್ಯ ನಡೆಯಿತು.
ಸ್ಮಶಾನ ಒತ್ತುವರಿ ತೆರವುಗೊಳಿಸುವಂತೆ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಆಂಜಿನಪ್ಪ ಮಾತನಾಡಿ, ಸ.ನಂ.236ರಲ್ಲಿ ಸಾರ್ವಜನಿಕರ ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿದ್ದ 7.10 ಎಕರೆ ಜಾಗದಲ್ಲಿ 2.20 ಎಕರೆ ಒತ್ತುವರಿ ಮಾಡಿಕೊಂಡು ಖಾಸಗಿಯವರು ತಡೆಗೋಡೆ ನಿರ್ಮಿಸಿ ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವಾಗಲೇ ಕಂದಾಯ ಇಲಾಖೆ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗೆ ದೂರು ನೀಡಿ ಮನವಿ ಮಾಡಲಾಗಿತ್ತು.
ರುದ್ರಭೂಮಿ ಉಳಿವಿಗಾಗಿ ಕಳೆದ 20 ವರ್ಷದ ದಾಖಲಾತಿ ನೀಡಿದ್ದರೂ ಅಧಿಕಾರಿಗಳಿಗೆ ನೀಡಿದ್ದ ಕಡಿತ ಧೂಳು ತಿನ್ನುತ್ತಿತ್ತು. ದಾಖಲೆಯಲ್ಲಿ ಈ ಹಿಂದೆ ಸ್ಮಶಾನ ಜಾಗವೆಂದು ನಮೂದಾಗಿದೆ, ನಂತರ 2014ರಲ್ಲಿ ಸರ್ಕಾರಿ ಖರಾಬು ಎಂದು ಫಹಣಿಯಲ್ಲಿ ಬದಲಾವಣೆ ಮಾಡಲಾಗಿತ್ತು. ನಂತರ ಪ್ರಶ್ನಿಸಲಾಗಿ ಮತ್ತೆ ಸರ್ಕಾರಿ ಸ್ಮಶಾನ ಎಂದು ನಮೂದಾಗಿದೆ ಎಂದರು.
ಜಿಲ್ಲಾಧಿಕಾರಿಗೆ ಖುದ್ದು ಭೇಟಿ ಮಾಡಿದಾಗ, 2005ರಲ್ಲಿ ಹೈಕೋರ್ಟ್ ಪ್ರಕರಣವೊಂದರ ತೀರ್ಪಿನಂತೆ ಪಟ್ಟಣ ಮತ್ತು ಸುತ್ತಮುತ್ತಲಿನ ನಿವಾಸಿಗರಿಗೆ ಸ್ಮಶಾನದ ಜಾಗ ಕಾಯ್ದಿರಿಸಿ ಪುರಸಭೆಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದಾರೆ. ಪ್ರಸ್ತುತ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ 32 ಲಕ್ಷ ಅನುದಾನ ಬಂದಿದೆ, ಜಾಗ ಅಳತೆ ಮಾಡುತ್ತಿದ್ದಾರೆ. ಒತ್ತುವರಿ ತೆರವುಗೊಳಿಸುತ್ತಾರೋ ಇಲ್ಲವೊ ಅದು ಸಹ ಅನುಮಾನವಿದೆ ಎಂದರು.
ತಾಲ್ಲೂಕು ಕುರುಬರ ಸಂಘ ಕಾರ್ಯಾಧ್ಯಕ್ಷ ಸಿ.ಮುನಿರಾಜು ಮಾತನಾಡಿ, ಜೂನ್ 2015ರಲ್ಲಿ ತಾಲ್ಲೂಕಿನಲ್ಲಿ ಸತತ ಒಂದು ತಿಂಗಳು 37 ಭೂ ಮಾಪಕರು ಕೆರೆ ಕುಂಟೆ ರಾಜಕಾಲುವೆ ಸ್ಮಶಾನಗಳನ್ನು ಅಳತೆ ಮಾಡಿದ್ದರು.
ಸರ್ಕಾರದ ಆದೇಶದಂತೆ ಒತ್ತುವರಿ ತೆರವುಗೊಳಿಸಿ ಸರ್ಕಾರದ ಸ್ವತ್ತು ಎಂದು ನಾಮಫಲಕ ಹಾಕಬೇಕು ಯಾವುದೇ ಜಾಗ ತೆರವುಗೊಳಿಸಿಲ್ಲ, ಬರಿ ಕಾಟಾಚಾರದ ಕೆಲಸ ಅಷ್ಟೆ ಎಂದರು. ದಾಸಪ್ಪ, ಹಿಂದುಳಿದ ವರ್ಗ ಘಟಕಪದಾಧಿಕಾರಿಗಳು ಉಪಸ್ಥಿತರಿದ್ದರು.