ಕೋಲಾರ: ‘ಪ್ರಸ್ತುತ ಸಮಾಜ ಆತ್ಮ ದಾರಿದ್ರ್ಯದಿಂದ ಬಳಲುತ್ತಿದ್ದು, ದೇಶದಲ್ಲಿ ಸಮುದಾಯ ನಾಯಕತ್ವದ ಪ್ರಜ್ಞೆಯು ಮಸುಕಾಗಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ವಿಷಾದಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸಿರಿಗನ್ನಡ ಪುಸ್ತಕ ಮಳಿಗೆಯ ಸಹ ಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಮೊರಸುನಾಡು ಅನು ಭಾವಿಗಳು ವಿಷಯ ಕುರಿತ ಅಂತರರಾಜ್ಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ತಾತ್ವಿಕ ಬದ್ಧತೆ ಇಲ್ಲದ ಹೋರಾಟ, ನೈತಿಕತೆ ಇಲ್ಲದ ರಾಜ ಕಾರಣ, ದಯೆ ಇಲ್ಲದ ಧರ್ಮ, ಪಾಪ ಪ್ರಜ್ಞೆ ಇಲ್ಲದ ಸಂಪತ್ತು ಹೆಚ್ಚುತ್ತಿದೆ. ಇದರಿಂದ ಕಂಗೆಟ್ಟಿರುವ ಜನರಿಗೆ ತೃಪ್ತಿ ಇಲ್ಲವಾಗಿದೆ. ಅನ್ಯಾಯವಾಗಿ ಗಳಿಸಿದ ಸಂಪತ್ತು ಹೆಚ್ಚು ದಿನ ಉಳಿಯುವುದಿಲ್ಲ. ಬದುಕಿನ ಮೌಲ್ಯಗಳನ್ನು ಕಲಿಸುವುದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಯಾವುದೇ ಸ್ವಯಂ ಘೋಷಣೆ ಅಥವಾ ಹೇಳಿಕೆಗಳಿಲ್ಲದೆ ಜೀವನದ ಮಾಮೂಲು ಅನುಭವಗಳನ್ನು ಅದರ ಲೋಕಾಂತರದ ಮಹತ್ವಕ್ಕೆ ಕೊಂಡೊಯ್ದು ಅದನ್ನು ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಂಡವರು ಅನುಭಾವಿಗಳಾಗುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ವೇದ ಮತ್ತು ಪುರಾಣಗಳಿಗೆ ಬಹುದೊಡ್ಡ ಸ್ಥಾನವಿದೆ. ಅವು ಗಳನ್ನು ಓದಿ ಎಷ್ಟು ಮಂದಿ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಅವುಗಳ ಸುತ್ತ ಇದ್ದ ಸಂತರು, ದಾಸರು, ಶರಣರು, ಸನ್ಯಾಸಿಗಳು ಹಾಗೂ ಅನುಭಾವಿಗಳು ಬಿಟ್ಟು ಹೋಗಿರುವ ಮೌಲ್ಯಗಳು ಇಂದಿಗೂ ಜೀವಂತವಾಗಿವೆ ಎಂದರು.
ಪ್ರಜ್ಞೆ ಇಲ್ಲವಾಗಿದೆ: ಅನುಭಾವಿಗಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ತಮ್ಮ ಸುತ್ತಲಿನ ಜೀವನದ ಗುಟ್ಟುಗಳನ್ನು ಕಲಿತು ಅವುಗಳನ್ನು ಜನರಿಗೂ ಸುಲಭ ವಾಗಿ ಕಲಿಸಿ ಬದುಕಿನಲ್ಲಿ ಅಳವಡಿಸಿ ಕೊಳ್ಳುವ ಸಿದ್ಧಾಂತ ರೂಪಿಸಿದರು. ಹೃದಯ ಮತ್ತು ಮಿದುಳಿಗೆ ಬೇಕಾಗುವಷ್ಟು ಆಹಾರ ನೀಡಿ ಜನರ ನಡುವಿನ ಬುದ್ಧರೆನಿಸಿಕೊಂಡರು. ಅವರ ಸಿದ್ಧಾಂತ ಜನರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಇತ್ತು. ಜತೆಗೆ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿತ್ತು. ಆದರೆ, ಹಾದಿ ತಪ್ಪುತ್ತಿರುವ ಯುವ ಪೀಳಿಗೆಯಲ್ಲಿ ಅಂತಹ ಮೌಲ್ಯಾಧಾರಿತ ಪ್ರಜ್ಞೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಓದುವ ಅಭಿಲಾಷೆ: ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸುವು ದರಿಂದ ಅಥವಾ ಖರೀದಿಸುವುದರಿಂದ ಸಾಹಿತ್ಯ ಮತ್ತು ಭಾಷೆ ಬೆಳೆಯುವುದಿಲ್ಲ. ಬದಲಿಗೆ ಓದುಗರ ಸಂಖ್ಯೆ ಹೆಚ್ಚಿಸುವು ದರಿಂದ ಸಾಹಿತ್ಯ ಹಾಗೂ ಭಾಷೆ ಬೆಳೆ ಯುತ್ತದೆ. ಯಾವ ಸಾಹಿತ್ಯ ಜನಸಾಮಾನ್ಯ ರನ್ನು ತಲುಪುವುದಿಲ್ಲವೋ ಅದಕ್ಕೆ ಉಳಿವಿಲ್ಲ. ಆದ್ದರಿಂದ ಯುವ ಪೀಳಿಗೆ ಮತ್ತು ಗ್ರಾಮೀಣರಲ್ಲಿ ಓದುವ ಅಭಿಲಾಷೆ ಬೆಳೆಸಬೇಕು. ಮೌಲ್ಯಭರಿತ ಪುಸ್ತಕಗಳನ್ನು ತಲುಪಿಸಬೇಕು. ಯುವ ಪೀಳಿಗೆ ಯನ್ನು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.
ಪ್ರಾಧಿಕಾರವು ಕೇವಲ ಪುಸ್ತಕ ಗಳನ್ನು ಮುದ್ರಿಸುವುದಕ್ಕಾಗಿ ಇಲ್ಲ. ಪ್ರಾಧಿಕಾರದಿಂದ ಎಷ್ಟು ಪುಸ್ತಕಗಳು ಮಾರಾಟವಾಗಿವೆ ಎಂಬುದು ಮುಖ್ಯ ವಲ್ಲ. ಬದಲಿಗೆ ಜನರಲ್ಲಿ ಎಷ್ಟು ಸಾಮಾ ಜಿಕ ಪ್ರಜ್ಞೆ ಬೆಳೆಸಿದೆ ಎಂಬುದು ಮುಖ್ಯ. ದೇಶದಲ್ಲಿ ವಿವೇಕ, ಹೋರಾಟ ಒಗ್ಗೂಡ ಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯದ ಗ್ರಾಮೀಣ ಜನರಲ್ಲಿ ಮೌಲ್ಯ ಪ್ರಜ್ಞೆಯನ್ನು ನೆನಪಿಸುವುದಕ್ಕಾಗಿ ಪ್ರಾಧಿಕಾರವು ರಾಜ್ಯದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂತರ ಪರಂಪರೆ, ಕೈವಾರದಲ್ಲಿ ದಾಸರ ಕುರಿತು ಹಾಗೂ ದೇಶಿಯ ದರ್ಶನ ಮಾಲಿಕೆ ಆರಾಧನಾ ಕಾರ್ಯಕ್ರಮ, ಬುಡಕಟ್ಟು ಸೃಷ್ಟಿ ಪುರಾಣ ಕಾರ್ಯಕ್ರಮ, ನವ ಕರ್ನಾಟಕ ನಿರ್ಮಾಣ ಮಾಲಿಕೆ, ಅನುಭಾವಿಗಳ ಬದುಕು ಅಧ್ಯಯನ ಕುರಿತ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
* ಜಾತಿವಾದಿಗಳು ಅನುಭಾವಿಗಳಾಗಲು ಸಾಧ್ಯವಿಲ್ಲ. ಮೇಲು ಕೀಳಿನ ಲೆಕ್ಕಚಾರ ಹಾಕುವವರು ಉತ್ತಮ ಸಮಾಜ ಕಟ್ಟಲು ಸಾಧ್ಯವಿಲ್ಲ.
ಬಂಜಗೆರೆ ಜಯಪ್ರಕಾಶ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.