ಕಲಬುರ್ಗಿ: ಪಡಿತರ ವಿತರಿಸಲು ಟೋಕನ್ ಪದ್ಧತಿ ಜಾರಿಗೆ ತಂದಿರುವುದರಿಂದ ಬಡವರು ಹಾಗೂ ಅಲೆಮಾರಿ ಗಳು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಈ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಸಂಘಟನಾ ವೇದಿಕೆ ನೇತೃತ್ವದಲ್ಲಿ ಫಲಾನುಭವಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಮಾತ್ರ ಸೀಮೆಎಣ್ಣೆ ವಿತರಣೆಯಾಗುತ್ತಿದ್ದು, ನಗರದಲ್ಲೂ ಸೀಮೆಎಣ್ಣೆ ಕೊಡಬೇಕು. ಮಹಾನಗರ ಪಾಲಿಕೆಯಿಂದ ಸಿಲಿಂಡರ್ ಬೇಗನೆ ವಿತರಿಸಬೇಕು. ಪಾಲಿಕೆಯ ಶೇ 24.1 ಅನುದಾನವನ್ನು ಜನಸಂಖ್ಯೆ ಅನುಗುಣವಾಗಿ ವಾರ್ಡ್ಗಳಿಗೆ ಹಂಚಿಕೆ ಮಾಡಬೇಕು. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ಮನೆಗಳನ್ನು ವಿತರಿಸಲು ಫಲಾನುಭವಿಗ ಳಿಂದ ಹಣ ಕೇಳಿರುವುದರಿಂದ ನಿಜವಾದ ಬಡವರು ತೊಂದರೆಗೆ ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪಾಲಿಕೆಯ ವ್ಯಾಪ್ತಿಯ ಎಸ್.ಎಂ. ಕೃಷ್ಣ ಕಾಲೊನಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. 400 ಮನೆಗಳ ಕಿಟಕಿ, ಬಾಗಿಲುಗಳು ಮುರಿದು ಹೋಗಿದ್ದು, ಅವುಗಳ ದುರಸ್ತಿ ಮಾಡಿಸಬೇಕು. ನೀರು ಸರಬರಾಜು ವ್ಯವಸ್ಥೆ ಮಾಡಿಸಬೇಕು. ಸಮರ್ಪಕ ನೀರು ಪೂರೈಕೆಗೆ ಕೊಳವೆಬಾವಿಗಳನ್ನು ಹಾಕಿಸಬೇಕು. ಕಾಲೊನಿಗೆ ಬಸ್ ಸಂಚಾರ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ದತ್ತು ಎಸ್. ಹೈಯಾಳಕರ್, ಗುರುರಾಜ ಸಿ.ಬಂಡಿ, ಚಂದ್ರಕಾಂತ ಡಿ.ತೇಲಂಗಿ, ಭೂಷಣ ಪ್ರದೀಪಕುಮಾರ್, ಬಸು ನಾಗೂರ, ಸೂರ್ಯಕಾಂತ ತೇಲಂಗಿ, ಅನಿಲ ಕುಮಾರ ಹೂಗಾರ, ಇಮಾಮ್ಸಾಬ್ ಚಿಕನವಾಲೆ ಇದ್ದರು.