ಇಂಡಿ: ‘ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಭಾವಿಸಿ ಬೋಧಿಸಿದರೆ ಕಲಿಕೆ ಪರಿಣಾಮಕಾರಿಯಾಗಿರುತ್ತದೆ’ ಎಂದು ನಿವೃತ್ತ ಶಿಕ್ಷಕ ಎಸ್.ಡಿ.ಬಗಲಿ ಹೇಳಿದರು.
ಇಲ್ಲಿನ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ 1989–90ನೇ ಸಾಲಿನ ಎಸ್ ಎಸ್ಎಲ್ಸಿ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ಗುರು ವಂದನಾ ಹಾಗೂ ಬೆಳ್ಳಿ ಮಹೋತ್ಸವ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇದು ಅಪರೂಪದ ಕಾರ್ಯಕ್ರಮ. ನನ್ನೊಂದಿಗೆ ಇದ್ದ ನಾಲ್ವರು ಶಿಕ್ಷಕರು ನಮ್ಮನ್ನಲಿದ್ದಾರೆ. ಉಳಿದ ಎಂಟು ಜನ ಶಿಕ್ಷಕರನ್ನು 27 ವರ್ಷಗಳ ನಂತರ ವಿದ್ಯಾರ್ಥಿಗಳು ನೆನಪಿಸಿಕೊಂಡಿ ರುವುದು ವಿಶೇಷ’ ಎಂದರು.
ಶಿಕ್ಷಕ ಜಿ.ಜಿ.ಚವ್ಹಾಣ, ಎಂ.ಆರ್. ಪಾಟೀಲ ಮಾತನಾಡಿ,1990ನೇ ಸಾಲಿನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಪ್ರಗತಿಪರ ರೈತರೂ ಆಗಿದ್ದಾರೆ. ಎಲ್ಲರೂ ಒಂದೆಡೆ ಸೇರಿ, ಇಂತಹ ಕಾರ್ಯಕ್ರಮ ಆಯೋಜಿಸಿ ರುವುದು ಅನುಕರಣೀಯ ಎಂದರು.
ಮೃತಪಟ್ಟಿರುವ ಶಿಕ್ಷಕರಾದ ಸಿ.ಜೆ. ಗಿರಿಗೌಡರ, ಎಸ್.ಟಿ.ಕೋಳೇಕರ, ಬಿ.ಆರ್.ಕೂಡಗಿ, ಎಸ್.ಎಸ್.ತಿಳಗೂಳ ಅವರ ಮತ್ತು ತಮ್ಮ ಸಹಪಾಠಿಗರಲ್ಲಿ ಮೃತಪಟ್ಟ 6 ಜನರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ನಿಮಿಷ ಮೌನ ಆಚರಿಸಲಾಯಿತು.
ಮಂಜುನಾಥ ಕೋಟೆಣ್ಣನವರ, ಡಾ.ಸುನೀಲ ಪಾಟೀಲ, ವಕೀಲ ಉದಯ ಕೋಳೇಕರ, ರಾಜಕೀಯ ಮುಖಂಡ ಶ್ರೀಮಂತ ಬಾರಿಕಾಯಿ, ಗಂಗಾಧರ ಪೂಜಾರಿ, ಚಂದನ್ ಧನ ಪಾಲ, ಸಂತೋಷ ಪಾಟೀಲ, ಆದ್ಯ ಮಿತ್ರ ಮಾತನಾಡಿದರು. 8 ಜನ ಶಿಕ್ಷಕರಿಗೆ ಶಾಲು ಹೊದಿಸಿ, ಫಲ– ಪುಷ್ಪ ನೀಡಿ ಸನ್ಮಾನಿಸಲಾಯಿತು. ದಶರಥ ಕೋರೆ ನಿರೂಪಿಸಿ, ಮಂಜುನಾಥ ಕೋಟೆಣ್ಣನ ವರ ಸ್ವಾಗತಿಸಿ ದರು. ಚಂದನ್ ಧನಪಾಲ ವಂದಿಸಿದರು.