ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಿರುಪತಿ ವೆಂಕಟರಮಣನಿಗೆ 19 ಕೆ.ಜಿ. ಚಿನ್ನಾಭರಣ ಕೊಡುವ ಮೂಲಕ ಹರಕೆ ತೀರಿಸಲಿದ್ದಾರೆ.
ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ಅವರು ಈ ಹರಕೆ ಹೊತ್ತಿದ್ದರು. ಫೆಬ್ರುವರಿ 22 ರಂದು ಚಿನ್ನಾಭರಣ ಕೊಡುವ ಮೂಲಕ ಹರಕೆ ಅರ್ಪಿಸಲಿದ್ದಾರೆ.
₹ 5ಕೋಟಿ ಮೌಲ್ಯದ, 19 ಕೆ.ಜಿ ಚಿನ್ನಾಭರಣವನ್ನು ಅವರು ದೇವರಿಗೆ ಸಮರ್ಪಸಲಿದ್ದಾರೆ. ಪ್ರಾಚೀನ ಕಾಲದ ರಾಜಮನೆತನಗಳ ನಂತರ ಇಷ್ಟು ಬೆಲೆಬಾಳುವ ಆಭರಣಗಳನ್ನು ತಿರುಪತಿ ದೇವಸ್ಥಾನಕ್ಕೆ ನೀಡಿದ ದಾಖಲೆಯಲ್ಲಿ ತೆಲಂಗಾಣ ಸರ್ಕಾರದ ಹೆಸರು ಸೇರಲಿದೆ.
ಮುಖ್ಯಮಂತ್ರಿ ಮತ್ತವರ ಕುಟುಂಬ ವರ್ಗ ಹಾಗೂ ಸಂಪುಟ ಸಹೊದ್ಯೋಗಿಗಳು ಫೆಬ್ರುವರಿ 22 ರಂದು ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
**
ವಿಶೇಷ ಆಭರಣಗಳು
ಆಭರಣ ತಯಾರಿಸಲು ಚಂದ್ರಶೇಖರ್ ರಾವ್ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ₹5 ಕೋಟಿ ಹಣ ನೀಡಿದ್ದರು. ಗುತ್ತಿಗೆ ಆಧಾರದ ಮೂಲಕ ಕೊಯಮತ್ತೂರ್ನ ಕೀರ್ತಿಲಾಲ್ ಕಾಳಿದಾಸ್ ಜುವೆಲರ್ಸ್ ಅವರು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು 15 ದಿನಗಳಲ್ಲಿ ತಯಾರಿಸಿದ್ದಾರೆ.
ಇದರಲ್ಲಿ ತೆಲಂಗಾಣ ಪದ್ಧತಿಯಂತೆ 14.2 ಕೆ.ಜಿಯ ‘ಸಾಲಿಗ್ರಾಮ್ ಹರಾಮ್’ ಹಾಗೂ 4.61 ಕೆ.ಜಿಯ ಐದು ಸರಗಳಿವೆ.