ಮಂಗಳೂರು: ‘ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಭಯಾನಕ ಬದಲಾವಣೆ ಆಗಿವೆ. ಕೋಮುವಾದದ ವಿಷ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಕೆಂಪು ಕೋಟೆ, ವಿಧಾನಸಭೆಗಳಷ್ಟೇ ಅಲ್ಲದೇ, ನ್ಯಾಯಾಲಯಗಳ ಗೋಡೆಗಳ ಬಣ್ಣವನ್ನು ಕೇಸರಿಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಗರದ ನೆಹರು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಯುನಿಟಿ ಮಾರ್ಚ್ನ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನಾಡಿನಿಂದ ಬಂದ ಕೋಮುವಾದಿ, ನರಹಂತಕ ವ್ಯಕ್ತಿಯ ಭಾವಚಿತ್ರವನ್ನು ಎಲ್ಲೆಡೆ ನೋಡಬೇಕಾದ ದುಃಸ್ಥಿತಿ ಬಂದಿದೆ. ರಾಷ್ಟ್ರಪಿತ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ’ ಎಂದು ದೂರಿದರು.
‘ರಾಷ್ಟ್ರಗೀತೆ, ರಾಷ್ಟ್ರಧ್ವಜಗಳನ್ನು ಎಂದೂ ಗೌರವಿಸದ ಜನರು, ಅವುಗಳನ್ನೇ ಆಧಾರವಾಗಿ ಇಟ್ಟುಕೊಂಡು ದ್ವೇಷ ಬಿತ್ತುತ್ತಿದ್ದಾರೆ. ಯೋಗದ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರಗಳ ಮೇಲೂ ನಿಯಂತ್ರಣ ಹೇರಲಾಗುತ್ತಿದೆ. ಅಲ್ಪಸಂಖ್ಯಾತರ ವಿರುದ್ಧ ಕಾನೂನುಗಳು ಸಾಲದೆಂಬಂತೆ ಎನ್ಕೌಂಟರ್ಗಳನ್ನು ನಡೆಸಲಾಗುತ್ತಿದೆ’ ಎಂದು ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಬಾಬರಿ ಮಸೀದಿ ಕೆಡವಿದ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಪ್ರಯತ್ನಗಳು ಆರಂಭವಾಗಿವೆ. ಆದರೆ, ಇದರ ವಿರುದ್ಧ ಧ್ವನಿ ಕಡಿಮೆ ಆಗುತ್ತಿದ್ದು, ಈ ಕೆಲಸವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಡುತ್ತಿದೆ. ಪಿಎಫ್ಐ ಶೋಷಿತರು, ಅಲ್ಪಸಂಖ್ಯಾತರ ಸಬಲೀಕರಣದ ಸಂಕೇತವಾಗಿದೆ’ ಎಂದು ಹೇಳಿದರು.
ಇದಕ್ಕೂ ಮೊದಲು ನೆಹರು ಮೈದಾನದಲ್ಲಿ ಪಾಪ್ಯುಲರ್ ಫ್ರಂಟ್ನಿಂದ ಯುನಿಟಿ ಮಾರ್ಚ್, ಆಫೀಸರ್ಸ್ ಮಾರ್ಚ್ ಹಾಗೂ ಬ್ಯಾಂಡ್ ಡೆಮೊ ನಡೆಯಿತು.
**
ಷರತ್ತು ಬದ್ಧ ಅನುಮತಿ
ನಗರ ಪೊಲೀಸ್ ಆಯುಕ್ತರ ನಿಷೇಧದ ಪರಿಣಾಮವಾಗಿ ಉಳ್ಳಾಲದಲ್ಲಿ ನಡೆಯಬೇಕಿದ್ದ ಯುನಿಟಿ ಮಾರ್ಚ್, ಷರತ್ತು ಬದ್ಧ ಅನುಮತಿಯೊಂದಿಗೆ ನಗರದ ನೆಹರು ಮೈದಾನದಲ್ಲಿ ನಡೆಯಿತು. ಶುಕ್ರವಾರ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಕೆಲ ಷರತ್ತುಗಳನ್ನು ವಿಧಿಸಿ, ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಮಧ್ಯಾಹ್ನದಿಂದಲೇ ನೆಹರು ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.