ಮೂಡುಬಿದಿರೆ: ‘ಸಾಹಿತ್ಯಕ್ಕೆ ಜಾತಿ, ಮತ,ಅಂತಸ್ತು ಇಲ್ಲ. ಈ ಕಾರಣದಿಂದಾಗಿಯೇ ಜೀತದ ಸುಳಿಯಲ್ಲಿ ಕಮರಿದ್ದ ಕುಟುಂಬದಿಂದ ಒಡಹುಟ್ಟಿದವರು ನೀಡಿದ ಶೈಕ್ಷಣಿಕ ನೆರವು, ಎಲ್ಲಕ್ಕಿಂತ ಮುಖ್ಯವಾಗಿ ಕವಿತೆ ನನ್ನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ’ ಎಂದು ಕವಿ, ಬೆಂಗಳೂರಿನ ಪ್ರೊ. ಟಿ. ಯಲ್ಲಪ್ಪ ಹೇಳಿದರು.
ಭಾನುವಾರ ಕಾಂತಾವರ ಕನ್ನಡ ಭವನದಲ್ಲಿ ನಡೆದ ‘ಮುದ್ದಣ ಸಾಹಿತ್ಯೋತ್ಸವ 2017’, ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅವರು ತಮ್ಮ ‘ಕಣ್ಣ ಪಾಪೆಯ ಬೆಳಕು’ ಹಸ್ತಪ್ರತಿಗೆ 2016ನೇ ಸಾಲಿನ (42ನೇ) ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಪ್ರಶಸ್ತಿ ₹10 ಸಾವಿರ ನಗದು ಒಳಗೊಂಡಿದೆ.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನ ಅಧ್ಯಕ್ಷ ಕೆ.ಎಂ.ಉಡುಪ ವಹಿಸಿದ್ದರು. ನಂದಿಕೂರು ಯುಪಿಸಿಎಲ್ನ ಸಿಇಒ ಕಿಶೋರ್ ಆಳ್ವ ಇದ್ದರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಹದಿಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.