ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ ಕೊಡುವ 2016ರ ವಾರ್ಷಿಕ ಪ್ರಶಸ್ತಿಗೆ 30 ಜನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದೆ.
ಚಾಮರಾಜನಗರದ ಬಿ.ಎಸ್. ತಲ್ವಾಡಿ ಅವರನ್ನು, ‘ಡಾ.ಜೀ.ಶಂ. ಪರಮಶಿವಯ್ಯ’ ಪ್ರಶಸ್ತಿಗೆ, ಶಿವಮೊಗ್ಗ ಜಿಲ್ಲೆಯ ಬಿ.ಕುಮುದ ಅವರನ್ನು ‘ಡಾ.ಬಿ.ಎಸ್. ಗದ್ಗಿಮಠ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ (ಎರಡೂ ಜನಪದರಂಗ ತಜ್ಞ ಪ್ರಶಸ್ತಿಗಳು) ಎಂದು ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕರ್ನಾಟಕ ಜಾನಪದ ಪ್ರಶಸ್ತಿ ತಲಾ ₹25 ಸಾವಿರ ಹಾಗೂ ಜನಪದರಂಗ ತಜ್ಞ ಪ್ರಶಸ್ತಿಯು ತಲಾ ₹50 ಸಾವಿರ ಹಾಗೂ ಸ್ಮರಣಿಕೆ, ಶಾಲು, ಫಲತಾಂಬೂಲ ಒಳ ಗೊಂಡಿದೆ. ಫೆ.23 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾ ರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಹೇಳಿದರು.
‘ಅಕಾಡೆಮಿಯಿಂದ 110 ಕಲಾಸಕ್ತರಿಗೆ ವಿವಿಧ ಕಲಾಪ್ರಕಾರಗಳ ಕುರಿತು ತರಬೇತಿ ನೀಡಲಾಗಿದೆ. ಫೆ.21 ಮತ್ತು 22 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರದರ್ಶನ ನೀಡಲಿದ್ದಾರೆ. ಫೆ.23ರಂದು ಕನ್ನಡ ಬದುಕಿನ ಪ್ರಧಾನ ಭಾಗವಾಗಿ ಜಾನಪದ ಸಂಸ್ಕೃತಿ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ’ ಎಂದು ಅವರು ತಿಳಿಸಿದರು.