ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಜ್ಞ ವಚನಗಳು ಅಜರಾಮರ: ಶಾಸಕ

ಜಿಲ್ಲೆಯಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಣೆ; ಉತ್ತಮ ಶಿಕ್ಷಣ ಪಡೆಯಲು ರಾಘವೇಂದ್ರ ಹಿಟ್ನಾಳ ಸಲಹೆ
Last Updated 21 ಫೆಬ್ರುವರಿ 2017, 6:03 IST
ಅಕ್ಷರ ಗಾತ್ರ

ಕೊಪ್ಪಳ: ತ್ರಿಪದಿ ಕವಿ ಸರ್ವಜ್ಞರ ವಚನಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಶಾದಿ ಮಹಲ್‌ನಲ್ಲಿ ಸೋಮವಾರ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ-ಸಣ್ಣ ಸಮಾಜಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕ. ಶಿಕ್ಷಣದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ. ಸಮಾಜಗಳು ಅಭಿವೃದ್ಧಿಯತ್ತ ಸಾಗಿದರೆ ಜಯಂತಿಗಳ ಆಚರಣೆಗೆ ಅರ್ಥಬರುತ್ತದೆ ಎಂದರು.
ಕುಂಬಾರ ಸಮಾಜದ ತರಬೇತಿ ಕೇಂದ್ರ, ಸರ್ವಜ್ಞರ ಹೆಸರಿನಲ್ಲಿ ಉದ್ಯಾನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ ಅವರು ವಿಶೇಷ ಉಪನ್ಯಾಸ ನೀಡಿ, ತ್ರಿಪದಿ ಕವಿ ಸರ್ವಜ್ಞರವರನ್ನು ನೀತಿಭೋದಕರೆಂದು ಇತಿಹಾಸ ಪರಂಪರೆಯಲ್ಲಿ ಗುರುತಿಸಲಾಗಿದೆ. ಜಗತ್ತಿನಲ್ಲಿ ಬೇಕಾದಂತಹ ಸಾಮಾನ್ಯ ವೇದ ಪುರಾಣಗಳನ್ನು ಒಪ್ಪುವುದಿಲ್ಲ. ಬದುಕು ಮುಖ್ಯ ಎಂದು ಹೇಳಿದ ಅವರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಜಾತಿ, ಮತ, ಪಂಥ ಯಾಕೆ ಎಂದು ಪ್ರಶ್ನಿಸಿದ ಅವರು, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ.  ಬದುಕು ಮತ್ತು ಸಾವಿನ ನಡುವೆ ಮನುಷ್ಯರಾಗಿ ಬಾಳುವುದು ಮುಖ್ಯ ಎಂಬುದು ಕವಿ ಸರ್ವಜ್ಞ ಅವರು ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಎಂದರು. 

ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್‌ ಖಾದ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ತಹಶಿಲ್ದಾರ ಗುರುಬಸವರಾಜ, ಮುತ್ತುರಾಜ ಕುಷ್ಟಗಿ, ಕಳಕಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಪ್ರಭು ಕುಂಬಾರ ಇದ್ದರು.

ಕುಷ್ಟಗಿ ವರದಿ: ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ಎತ್ತಿ ತೋರಿಸಿ, ಮನುಷ್ಯ ಧರ್ಮವನ್ನು ಪ್ರತಿಪಾದಿಸಿದ ಕ್ರಾಂತಿಕಾರಿ ಕವಿ ಸರ್ವಜ್ಞನ ವಚನಗಳು ಪ್ರಸ್ತುತ ಎಂದು ತಹಶೀಲ್ದಾರ್‌ ಎಂ.ಗಂಗಪ್ಪ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿ, ಸಮಾಜ ಸುಧಾರಕ ಸರ್ವಜ್ಞನನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಸಂಕುಚಿತ ಮನೋಭಾವ ಸರಿಯಲ್ಲ ಎಂದರು.

ಬುತ್ತಿಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್‌.ಟಿ. ಕುಂಬಾರ ಮಾತನಾಡಿ, ಕೆಳಸ್ತರದಲ್ಲಿ ಜನಿಸಿದರೂ ಜಗಕೆಲ್ಲ ಜ್ಞಾನದ ಬೆಳಕು ನೀಡಿದ ಮಹಾನ್‌ ಕವಿ ಜನ್ಮದಿನವನ್ನು ಸಾರ್ವಜನಿಕವಾಗಿ ಆಸರಿಸುವ ಮೂಲಕ ಸರ್ಕಾರ ಸರ್ವಜ್ಞ ಅವರಿಗೆ ಮಹೋನ್ನತ ಗೌರವ ಸಮರ್ಪಣೆ ಮಾಡಿದೆ ಎಂದು ಹೇಳಿದರು.

ಸರ್ವಜ್ಞ, ಬಸವಣ್ಣ, ಕನಕದಾಸರು ಮಾನವತೆ ಸಂದೇಶ ಸಾರಿದರೆ ಹೊರತು ಜಾತಿ ಧರ್ಮಗಳ ಆಧಾರದ ಮೇಲೆ ಸಮಾಜವನ್ನು ವಿಭಜಿಸಿದವರಲ್ಲ. ಅವರ ತತ್ವ, ವಿಚಾರ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಕುಂಬಾರ ಸಮಾಜದ ಅಧ್ಯಕ್ಷ ರಾಮಣ್ಣ ಕುಂಬಾರ, ಪ್ರಮುಖರಾದ ಸಂಗಪ್ಪ ಕುಂಬಾರ, ವೀರಪ್ಪ ಕನ್ನಾಳ, ರವಿಕುಮಾರ ಕುಂಬಾರ, ಶರಣಪ್ಪ ಕುಂಬಾರ, ಬಸವರಾಜ ಕುಂಬಾರ, ಚನ್ನಪ್ಪ ನಿಡಶೇಸಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಗಿರೀಶ್‌ ರೋಡ್ಕರ್‌, ಶಿರಸ್ತೇದಾರ ರಜನಿಕಾಂತ ಇದ್ದರು. ಆದಯ್ಯ ಹಿರೇಮಠ ನಿರೂಪಿಸಿದರು. ಯಲಬುರ್ಗಾ ವರದಿ: ಸರ್ವ ಶ್ರೇಷ್ಠ ಕವಿ ಸರ್ವಜ್ಞ ಹಾಗೂ ಮಹಾರಾಜ ಛತ್ರಪತಿ ಶಿವಾಜಿ ಅವರ ವಿಚಾರಧಾರೆ ಹಾಗೂ ಆದರ್ಶ  ಪ್ರಸ್ತುತ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಉಮಾಪತಿ ಶೆಟ್ಟರ್‌ ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸರ್ವಜ್ಞ ಹಾಗೂ ಶಿವಾಜಿ ಜಯಂತಿಯಲ್ಲಿ ಮಾತನಾಡಿದರು.
ತಹಶೀಲ್ದಾರ್‌ ರಮೇಶ ಅಳವಂಡಿಕರ್‌ ಮಾತನಾಡಿ, ತ್ರಿಪದಿ ಸಾಹಿತ್ಯದ ಮೂಲಕ ಲೋಕದ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ ಸರ್ವಜ್ಞನ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಯಶ್ರೀ ಅರಕೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ, ಅಧಿಕಾರಿಗಳಾದ ಮುನಿರಾಜು, ಎಸ್‌.ವಿ. ಭಜಂತ್ರಿ, ನಾಗಪ್ಪ ಸಜ್ಜನ್‌, ಮಲ್ಲಿಕಾರ್ಜುನ ಶಾಸ್ತ್ರಿಮಠ ಶರಣಪ್ಪ ಅರಕೇರಿ ಭಾಗವಹಿಸಿದ್ದರು.

ಜಯಂತಿ ಆಚರಣೆಗೆ ನಿರಾಸಕ್ತಿ
ಗಂಗಾವತಿ:
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸರ್ವಜ್ಞನ ಜಯಂತಿ ಆಚರಿಸುವಂತೆ ಸರ್ಕಾರ ಸೂಚಿಸಿದ್ದರೂ, ತಾಲ್ಲೂಕು ಪಂಚಾಯಿತಿ, ಕೃಷಿ, ತೋಟಗಾರಿಕೆ, ನೋಂದಣಿ, ಅಬಕಾರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಸೋಮವಾರ ಜಯಂತಿ ಆಚರಿಸಲಿಲ್ಲ.
ಕಂದಾಯ ಇಲಾಖೆಯಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಶಿರಸ್ತೇದಾರ ಅನಂತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿರಸ್ತೇದಾರ ವಿರುಪಾಕ್ಷಪ್ಪ ಹೊರಪ್ಯಾಟಿ, ಆಹಾರ ನಿರೀಕ್ಷಕಿ ನಂದಾಪಲ್ಲೇದ,  ಸಿಬ್ಬಂದಿ ಹೈದರ್, ಸೌಭಾಗ್ಯಮ್ಮ, ಅನಿತಾ, ಸಾವಿತ್ರಿಬಾಯಿ ಪಾಲ್ಗೊಂಡಿದ್ದರು.

**

ಕುಂಬಾರ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡಲು ಮುಖ್ಯಮಂತ್ರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.
-ಕೆ.ರಾಘವೇಂದ್ರ ಹಿಟ್ನಾಳ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT