ವಿಜಯಪುರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ತೊಗರಿ ಬೆಳೆಗಾರರ ಪ್ರಕೋಷ್ಠಕದ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪಂಚಪ್ಪ ಕಲಬುರ್ಗಿ ಮಾತನಾಡಿ, ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು. ಈಗಾ ಗಲೇ ಜಿಲ್ಲೆಯಲ್ಲಿ ತೊಗರಿ ಖರೀದಿಗೋಸ್ಕರ ನೋಂದಣಿ ಮಾಡಿದ ರೈತರ ಸಂಖ್ಯೆ 37,900 ಎಂದು ಎ.ಪಿ.ಎಂ.ಸಿ. ಮೂಲಕ ತಿಳಿದು ಕೊಂಡಿದ್ದೇವೆ ಎಂದರು.
ಆದರೆ, ಇಲ್ಲಿಯವರೆಗೆ ಕೇವಲ 4837 ರೈತರ ತೊಗರಿಯನ್ನು ಖರೀದಿ ಮಾಡಲಾಗಿದೆ. ಇನ್ನೂ ಶೇ 90ರಷ್ಟು ರೈತರು ಜಿಲ್ಲೆಯಲ್ಲಿ ತೊಗರಿ ಮಾರಾಟ ಮಾಡಲಾಗದೆ ಹಣದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಭೀಕರ ಬರಗಾಲ ಇರುವುದರಿಂದ ರೈತರು ಬೆಳೆದ ತೊಗರಿಯನ್ನು ಖರೀದಿಸಿ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರ ಇದ್ದು ಇಗಿರುವ ತೊಗರಿ ಖರೀದಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಅಲ್ಲಿರುವ ದಲ್ಲಾಲಿಗಳ ಪಾಲಾಗಿವೆ ಎಂದು ಆರೋಪಿಸಿದರು.
ಹಿಂದಿನ ದಿನಗಳಲ್ಲಿ ತೊಗರಿ ಪ್ರತಿ ಕ್ವಿಂಟಲ್ಗೆ ₹11 ಸಾವಿರದಿಂದ ₹ 12 ಸಾವಿರಕ್ಕೆ ಮಾರಲಾಗಿತ್ತು. ಆದರೆ, ಇಂದು ₹ 4,500 ರಿಂದ ₹ 4,800ಕ್ಕೆ ಮಾರುವ ದುಸ್ಥಿತಿ ಎದುರಾಗಿದೆ. ಈ ವ್ಯವಹಾರದ ನಡುವೆ ಇರುವ ದಲ್ಲಾಳಿಗಳು ಈಗಿನ ಕಾಂಗ್ರೆಸ್ ಸರ್ಕಾರದ ಏಜೆಂಟರು, ಇವರು ರೈತರ ಕಡೆಯಿಂದ ಪ್ರತಿ ಕ್ವಿಂಟಲ್ಗೆ ₹ 4ಸಾವಿರದಿಂದ ₹4,500ಕ್ಕೆ ಖರೀದಿಸಿ ಸರ್ಕಾರಕ್ಕೆ ₹ 5,500 ರಿಂದ ₹ 6ಸಾವಿರ ವರೆಗೆ ಮಾರಿ, ಬಂದ ಹಣದಲ್ಲಿ ಮುಖ್ಯಮಂತ್ರಿಗಳಿಗೆ ಕಮಿಷನ್ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಅನೀಲ ಜಮಾದಾರ, ರವಿಕಾಂತ ಬಗಲಿ, ವಿವೇಕಾನಂದ ಡಬ್ಬಿ, ಶ್ರೀಶೈಲಗೌಡ ಬಿರಾದಾರ, ಸೋಮನಗೌಡ ಪಾಟೀಲ ಸಾಸನೂರ, ರಾಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಭೀಮಾಶಂಕರ ಹದನೂರ, ಎಂ.ಎಸ್. ಗುಡ್ಡೋಡಗಿ, ಶಿವಾನಂದ ಅವಟಿ, ರಾಜು ಕಿತ್ತಲಿ, ಹಂಜಗಿ ಸರ, ಕಾಸುಗೌಡ ಬಿರಾದಾರ, ರವಿ ಬಿರಾದಾರ, ಪ್ರಕಾಶ ಅಕ್ಕಲಕೋಟ, ಬಾಪುಗೌಡ ಪಾಟೀಲ, ಶಂಕರಗೌಡ ಬಿರಾದಾರ, ಎಸ್.ಎನ್.ಕುಂಬಾರ, ರವಿ ಜಾಧವ, ಶರಣು ದ್ಯಾಬೇರಿ ಇದ್ದರು.