ಬೆಳಗಾವಿ: ಇಲ್ಲಿನ ಚವಾಟಗಲ್ಲಿಯ ರಾಜ ರಸ್ತೆಯಲ್ಲಿ ಕಲುಷಿತ ನೀರು ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಸ್ಥಳೀಯರು, ಕಲುಷಿತ ನೀರು ತುಂಬಿದ ಬಾಟಲಿ ಹಾಗೂ ಖಾಲಿ ಕೊಡ ಪ್ರದರ್ಶಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಒಂದು ತಿಂಗಳಿನಿಂದ ಚವಾಟ ಗಲ್ಲಿಯ ನಲ್ಲಿಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗಲ್ಲಿಯ ಕರ್ತವ್ಯ ಮಹಿಳಾ ಮಂಡಳದ ಸದಸ್ಯರು ಹಾಗೂ ನಿವಾಸಿಗಳು ದೂರಿದರು.
‘ವಾರದಲ್ಲಿ ಒಂದೆರಡು ಬಾರಿ ನೀರು ಬಿಡಲಾಗುತ್ತದೆ. ಅದೂ ಕಲುಷಿತವಾಗಿರುತ್ತದೆ. ಇದರಿಂದ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ವಾರ್ಡ್ ನಂ. 40 ಹಾಗೂ 41ರಲ್ಲಿ ನೀರಿನ ಕೊರತೆ ಬಹಳವಿದೆ. ಒಂದು ವರ್ಷದಿಂದಲೂ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದೇವೆ. ಬಾವಿಯೂ ಇಲ್ಲ, ಬೋರ್ವೆಲ್ ವ್ಯವಸ್ಥೆಯೂ ಇಲ್ಲ. ಮಹಾನಗರಪಾಲಿಕೆ ಅಥವಾ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ’ ಎಂದು ಆರೋಪಿಸಿದರು.
‘ಹೆಸ್ಕಾಂನವರು ರಸ್ತೆ ಅಗೆಯುವಾಗ ನೀರಿನ ಪೈಪ್ ಒಡೆದು, ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವೆಡೆ ಕಲುಷಿತ ನೀರು ಬರುತ್ತಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.