ಹರಪನಹಳ್ಳಿ: ದೇವದಾಸಿ ಮಹಿಳೆಯರ ಕುಟುಂಬದ ಪುನರ್ವಸತಿ ಯೋಜನೆಗೆ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಿನಿ ವಿಧಾನಸೌಧ ತಲುಪಿ ಕೆಲ ಕಾಲ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಟಿ.ವಿ. ರೇಣುಕಮ್ಮ ಮಾತನಾಡಿ, ‘ರಾಜ್ಯದಲ್ಲಿ ದೇವದಾಸಿಯರ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿದ್ದು, 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆಸ್ತಿಯೇ ಇಲ್ಲದೆ ಶಿಕ್ಷಣದಿಂದಲೂ ವಂಚಿತರಾಗಿ ಕನಿಷ್ಠ ಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಎಂದರು.
ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ದೇವದಾಸಿ ಮಕ್ಕಳನ್ನು ಸರ್ಕಾರ ದತ್ತು ಪಡೆದು ಶಿಕ್ಷಣ, ಉದ್ಯೋಗ ನೀಡಬೇಕು. ಹೆಣ್ಣು ಮಕ್ಕಳ ಮದುವೆಗೆ ಕನಿಷ್ಠ ₹ 5 ಲಕ್ಷ ಅನುದಾನ ನೀಡಬೇಕು.
ದೇವದಾಸಿ ಮಕ್ಕಳಿಗೆ ಒಳ ಮೀಸಲಾತಿ ನೀಡಿ, ವಿದ್ಯಾವಂತ ಯುವಕರಿಗೆ ಮಾಸಿಕ ಕನಿಷ್ಠ ₹ 3 ಸಾವಿರ ನಿರುದ್ಯೋಗಿ ಭತ್ಯೆ ನೀಡಬೇಕು. ದೇವದಾಸಿ ಮಹಿಳೆಯರಿಗೆ ಮಾಸಿಕ ಕನಿಷ್ಠ ₹ 1500 ಸಹಾಯಧನ ನೀಡಬೇಕು. ಉಚಿತ ಮನೆ ನೀಡಬೇಕು. ಉಪ ಕಸುಬಿಗಾಗಿ ಕನಿಷ್ಠ ₹ 5 ಲಕ್ಷ ಸಾಲ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆಗಳ ಪತ್ರವನ್ನು ತಹಶೀಲ್ದಾರ್ ಕೆ.ಗುರು ಬಸವರಾಜ್ ಅವರಿಗೆ ಸಲ್ಲಿಸಿದರು.
ಮುಖಂಡರಾದ ಎನ್.ಹಾಲೇಶ್ ಮೈಲಪ್ಪ, ಸವಿತಾ, ಚಂದ್ರಮ್ಮ ತಿರುಕಪ್ಪ, ನಂದೀಶ್, ಗೋಣೆಪ್ಪ ಉಪಸ್ಥಿತರಿದ್ದರು.