ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದ್ದ ಟಿಪ್ಪು ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಶೇ 80ರಷ್ಟು ಮುಗಿದಿದ್ದು, ಶೀಘ್ರದಲ್ಲಿ ದ್ವಿಪಥ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತ ತಿಳಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಶಸ್ತ್ರಾಗಾರ ಸ್ಥಳಾಂತರ ಮತ್ತು ರೈಲು ಹಳಿ ನಿರ್ಮಾಣ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು.
ಪಾಂಡವಪುರ– ನಾಗನಹಳ್ಳಿ ಮಾರ್ಗದಲ್ಲಿ ಕಾವೇರಿ ನದಿಯ ಎರಡು ಸೇತುವೆಗಳ ಮಧ್ಯೆ 500 ಮೀಟರ್ ಕಾಮಗಾರಿ ಬಾಕಿ ಉಳಿದಿದೆ. ಏಪ್ರಿಲ್ ಅಂತ್ಯದ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿ 8 ವರ್ಷಗಳ ಹಿಂದೆ ಆರಂಭವಾಗಿತ್ತು.
ಐದು ವರ್ಷಗಳ ಹಿಂದೆ ಸ್ಮಾರಕ ಸ್ಥಳಾಂತರ ಪ್ರಯತ್ನ ಶುರುವಾಗಿತ್ತು. 6 ತಿಂಗಳ ಹಿಂದೆ ಸ್ಮಾರಕ ಸ್ಥಳಾಂತರ ಕಾರ್ಯ ಆರಂಭಿಸಲಾಗಿತ್ತು. ಜೋಡಿ ರೈಲು ನಿರ್ಮಾಣದಿಂದ ಬೆಂಗಳೂರು– ಮೈಸೂರು ನಡುವಿನ ಸಂಚಾರ ಸಮಯದಲ್ಲಿ 20 ನಿಮಿಷ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಐತಿಹಾಸಿಕ ಘಟನೆ: ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಐತಿಹಾಸಿಕ ಘಟನೆಗಳಲ್ಲೊಂದಾಗಿದೆ. ಶಸ್ತ್ರಾಗಾರ ಸ್ಥಳಾಂತರ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಅಮೆರಿಕದ ಉಲ್ಫೆ ಮತ್ತು ಭಾರತದ ಪಿಎಸ್ಎಲ್ ಕಂಪೆನಿಗಳು ಜಂಟಿಯಾಗಿ ಸ್ಥಳಾಂತರ ಕಾರ್ಯ ನಡೆಸುತ್ತಿವೆ. ಎರಡು ದಿನಗಳಲ್ಲಿ ಗೊತ್ತು ಮಾಡಿರುವ ಸ್ಥಳಕ್ಕೆ ಶಸ್ತ್ರಾಗಾರ ತಲುಪಲಿದೆ. ಮೈಸೂರು ವಲಯದ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಾಗಿ ಇಲ್ಲಿನ ತಂಡಕ್ಕೆ ₹ 50 ಸಾವಿರ ಇನಾಮು ನೀಡಲಾಗುವುದು ಎಂದರು.
ಮೈಸೂರು ಜಿಲ್ಲೆಯ ಕಡಕೊಳ ಬಳಿ ₹ 100 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ರೈಲು ನಿಲ್ದಾಣ ನಿರ್ಮಿಸಲು ಉದ್ದೇಶಿ ಸಲಾಗಿದೆ. ಸದ್ಯ ಬೆಂಗಳೂರಿನಿಂದ ರಾಮನಗರದವರೆಗೆ ಇಎಂಯು (ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ಸಂಪರ್ಕವಿದ್ದು, ಅದನ್ನು ಮಂಡ್ಯದವರೆಗೆ ವಿಸ್ತರಿಸುವಂತೆ ಕೋರಿಕೆ ಬಂದಿದೆ ಎಂದರು.
ಬೆಂಗಳೂರು– ಹಾಸನ ರೈಲು ಮಾರ್ಗ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವರ ಒಪ್ಪಿಗೆ ಸಿಕ್ಕಿದ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.
ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿನ ಎಲ್ಲ ರೈಲು ಮಾರ್ಗಗಳನ್ನು ಜೋಡಿ ರೈಲು ಮಾರ್ಗಗಳಾಗಿ ಪರಿವರ್ತಿಸುವ ಉದ್ದೇಶವಿದೆ. ಮೈಸೂರು– ಕುಶಾಲ ನಗರ ನಡುವಿನ 120 ಕಿ.ಮೀ ಸೇರಿದಂತೆ 30 ಹೊಸ ಮಾರ್ಗಗಳು ನಿರ್ಮಾಣ ವಾಗಲಿವೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜೋಡಿ ರೈಲು ಮಾರ್ಗ ನಿರ್ಮಾ ಣದ ಬಳಿಕ ಮೈಸೂರುವರೆಗಿನ ವಿದ್ಯುತ್ ಮಾರ್ಗ ನಿರ್ಮಾಣವನ್ನು ಜೂನ್ ವೇಳೆಗೆ ಪೂರ್ಣಗೊಳಿಸಲಾಗುವುದು. ಮೈಸೂರು ತಾಲ್ಲೂಕಿನ ನಾಗನಹಳ್ಳಿ ಬಳಿ ಗೂಡ್್ಸ ರೈಲು ವಿಭಾಗದ ಉಪವಿಭಾಗ ತೆರೆಯಲಾಗುವುದು. ಶ್ರೀರಂಗಪಟ್ಟಣ ರೈಲು ನಿಲ್ದಾಣವನ್ನು ನವೀಕರಣ ಮಾಡಲಾಗುವುದು ಎಂದು ಹೇಳಿದರು.