ಮುಂಡಗೋಡ: ಕಳೆದ ಒಂದು ವಾರದಿಂದ ಕುಡಿಯಲು ನೀರು ಬಿಟ್ಟಿಲ್ಲ ಎಂದು ಆರೋಪಿಸಿ, ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಬಾಚಣಕಿ ಗ್ರಾಮ ಪಂಚಾಯ್ತಿಯಲ್ಲಿ ಶುಕ್ರವಾರ ಜರುಗಿದೆ.
ಬಾಚಣಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನ್ಯಾಸರ್ಗಿ ಹಾಗೂ ಪ್ಲಾಟ್ ಪ್ರದೇಶಕ್ಕೆ ಕಳೆದ ಹಲವು ದಿನದಿಂದ ಕುಡಿಯುವ ನೀರು ಸರಬರಾಜು ಮಾಡಿಲ್ಲ. ಈ ಬಗ್ಗೆ ಹಲವು ಸಲ ಗ್ರಾಮ ಪಂಚಾಯ್ತಿಯವರಿಗೆ ತಿಳಿಸಿ ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಕೂಡಲೇ ದಿನಕ್ಕೆ ಎರಡು ಬಾರಿಯಂತೆ ನೀರು ಬಿಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾಕಾರರು ತಾವು ತಂದಿದ್ದ ಖಾಲಿ ಕೊಡಗಳನ್ನು ನೆಲಕ್ಕೆ ಹೊಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವ ಯತ್ನ ಮಾಡಿದರು.
‘ನ್ಯಾಸರ್ಗಿ ಭಾಗದಿಂದ ಒಟ್ಟು ಮೂವರು ಸದಸ್ಯರಿದ್ದಾರೆ. ಕಳೆದ ಒಂದು ವಾರದಿಂದ ನೀರಿಗಾಗಿ ಒದ್ದಾಡು ತ್ತಿದ್ದರೂ , ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ. ನೀರು ಕೇಳಲು ಹೋದರೆ, ಅಧ್ಯಕ್ಷೆಯ ಪುತ್ರ ಹೆದರಿಸಲು ಬರುತ್ತಾರೆ’ ಎಂದು ಪ್ರತಿಭಟನಾಕಾರ ಈರಪ್ಪ ನ್ಯಾಸರ್ಗಿ ದೂರಿದರು.
‘ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದರೂ ಸಹಿತ, ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸದ್ಯ ನ್ಯಾಸರ್ಗಿ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಣಪತಿ ಪಿಲ್ಲೋಜಿ ಹೇಳಿದರು.