ಗುಂಡ್ಲುಪೇಟೆ: ಮಹದೇವ ಪ್ರಸಾದ್ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಉಪ ಚುನಾವಣೆಯಲ್ಲಿ ಅವರ ಪತ್ನಿಗೆ ಬೆಂಬಲಿಸಬೇಕು. ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ ಎಂದು ಸಾಬೀತುಪಡಿಸಬೇಕು ಎಂದು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಭಾನುವಾರ ಮನವಿ ಮಾಡಿದರು.
ಚುನಾವಣೆ ಘೋಷಣೆ ಬಳಿಕ ಪಟ್ಟಣದಲ್ಲಿ ನಡೆದ ಪ್ರಥಮ ಸಭೆಯಲ್ಲಿ ವಿವಿಧ ಮುಖಂಡರು ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ‘ಈ ಉಪ ಚುನಾವಣೆಯ ಮೂಲಕ ಮಹದೇವ ಪ್ರಸಾದ್ ಅವರು 6ನೇ ಬಾರಿಗೆ ಗೆಲುವು ಪಡೆಯಬೇಕು’ ಎಂದು ಆಶಿಸಿದರು.
‘ಗೀತಾ ಅವರನ್ನು ಬೆಂಬಲಿಸಿ ಇದನ್ನು ಸಾಧ್ಯವಾಗಿಸಬೇಕು. ಮಹದೇವ ಪ್ರಸಾದ್ ಚಾಲನೆ ನೀಡಿದ್ದು, ಉಳಿದ ಕೆಲಸಗಳು ಬಾಕಿ ಉಳಿದಿರುವ ಅವಧಿ
ಯಲ್ಲಿ ಆಗಬೇಕು. ಇದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಅಗತ್ಯ’ ಎಂದರು.
‘ಬಿಜೆಪಿ ಭ್ರಮೆ ಸೃಷ್ಟಿಸಿ ಮತಗಳನ್ನು ಪಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಹುಪಾಲು ಬೇಡಿಕೆಗಳನ್ನು ಈಡೇರಿಸಿದೆ. ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದೆ’ ಎಂದರು.
ಸಂಸದ ಆರ್.ಧ್ರುವನಾರಾಯಣ ಅವರು, ‘ಗುಂಡ್ಲುಪೇಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಎಚ್.ಎಸ್. ಮಹದೇವಪ್ರಸಾದ್ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ‘ಸಾಮಾಜಿಕ ನ್ಯಾಯ ಕೇವಲ ಜಾತಿಗೆ ಸಂಬಂಧಿಸಿದ್ದಲ್ಲ. ಎಲ್ಲ ಸಮಾಜದ ಬಡ ಜನರಿಗೆ ನ್ಯಾಯ ಸಿಗಬೇಕು ಎಂಬುದು ಮುಖ್ಯಮಂತ್ರಿಗಳ ನಿಲುವು’ ಎಂದು ಪ್ರತಿಪಾದಿಸಿದರು. ಈಗ ರೈತರ ಬಗ್ಗೆ ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ಬಿಜೆಪಿ ಆಡಳಿತ
ದಲ್ಲಿ ಇದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಠೇವಣಿ ಸಿಗದಿರಲಿ: ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಿ, ಬಿಜೆಪಿ ಅಭ್ಯರ್ಥಿಯ ಠೇವಣಿ ಕಳೆದು ಕೊಳ್ಳುವಂತೆ ಮಾಡಬೇಕು’ ಎಂದರು.
ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಶ್ರೀನಿವಾಸಪ್ರಸಾದ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಕೈ ಬಿಡಲಾಗಿತ್ತು. ಆದರೆ ಅವರು ಅಧಿಕಾರ ಕೈ ತಪ್ಪಿತಲ್ಲ ಎಂದು ಪಕ್ಷಕ್ಕೆ ಮೋಸ ಮಾಡಿದ್ದಾರೆ’ ಎಂದು ಟೀಕಿಸಿದರು.
ಸಚಿವರಾದ ಯು.ಟಿ.ಖಾದರ್, ಎಚ್.ಸಿ.ಮಹದೇವಪ್ಪ, ತನ್ವೀರ್ಸೇಠ್, ಶಾಸಕರಾದ ವೆಂಕಟೇಶ್, ಎಂ.ಕೆ. ಸೋಮಶೇಖರ್, ಪುಟ್ಟರಂಗಶೆಟ್ಟಿ. ನರೇಂದ್ರ, ಜಯಣ್ಣ, ವಾಸು, ಪಿ.ಎಂ. ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಧರ್ಮಸೇನಾ, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿ.ಪಂ ಅಧ್ಯಕ್ಷ ರಾಮಚಂದ್ರ, ಸದಸ್ಯರಾದ ಕೆ.ಎಸ್.ಮಹೇಶ್, ಚೆನ್ನಪ್ಪ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ನಂಜುಂಡಪ್ರಸಾದ್, ಗಣೇಶ್ಪ್ರಸಾದ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.