ಇಂಡಿ: ಭೀಮಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಬರುವ ಅಕ್ಟೋಬರ್ 15ರಿಂದ ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ತಾಲ್ಲೂಕಿನ ಮರಗೂರ ಗ್ರಾಮದ ಬಳಿಯ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಾಯೋಗಿಕ ಕಬ್ಬು ನುರಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ ನಂತರ ನಡೆದ ಮಾತನಾಡಿದ ಅವರು, ಅನಿ ವಾರ್ಯ ಕಾರಣಗಳಿಂದ ಅಕ್ಟೋಬರ್ ನಲ್ಲಿ ತಪ್ಪಿದರೆ ನವೆಂಬರ್ 1ರಂದು ಕಾರ್ಯಾರಂಭ ಮಾಡುವುದು ಎಂದರು.
ಪ್ರತಿದಿನ 3,500 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆಯಲ್ಲಿ 2017–2018ನೇ ಸಾಲಿನಲ್ಲಿ 4– 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
14 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವೂ ಹೊಂದಿರು ಕಾರ್ಖಾನೆ ಸಕ್ಕರೆ ಉತ್ಪಾ ದನೆ ಆರಂಭಿಸಿದ ನಂತರ ರೈತರಿಂದ ಬರಬೇಕಿರುವ ₹ 14.90 ಕೋಟಿ ಷೇರು ಹಣ ಸಂಗ್ರಹಿಸಲಾಗುವುದು ಎಂದರು.
ಇಂಡಿ ಹಾಗೂ ಸಿಂದಗಿ ತಾಲ್ಲೂಕುಗಳ 16,439 ಜನ ರೈತರು ಈ ಕಾರ್ಖಾನೆಯ ಸದಸ್ಯರನ್ನು ಹೊಂದಿದ್ದು, ಈ ಪೈಕಿ ಶೇ 20ರಷ್ಟು ಜನ ಸದಸ್ಯರು ಸಾವನ್ನಪ್ಪಿದ್ದಾರೆ. ಆದರೆ, ಕಾರ್ಖಾನೆ ಆರಂಭಗೊಂಡಿದ್ದರಿಂದ ಈ ಆವಾಜ್ ಅವರ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದರು.
ಅಧಿಕಾರಿಗಳಾದ ಶಿವಾ ಕುಲಕರ್ಣಿ ಮತ್ತು ರಾಜಗೋಪಾಲ ಕೇವಲ 14 ತಿಂಗಳಲ್ಲಿ ಈ ಕಾರ್ಖಾನೆಯನ್ನು ಸನ್ನದ್ಧಗೊಳಿಸಿದ್ದಾರೆ ಎಂದೂ ಹೇಳಿದರು.
ಇಂಡಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರುಕ್ಮುದ್ದೀನ್ ತದ್ದೇವಾಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಯೋಗೆಪ್ಪ ನೇದಗಲಿ, ಕಾಂಗ್ರೆಸ್ ಮುಖಂಡ ಪ್ರಶಾಂತ ಕಾಳೆ, ಉಪ ವಿಭಾಗಾಧಿಕಾರಿ ಡಾ.ಶಂಕರ ವಣಿಕ್ಯಾಳ, ಡಿವೈಎಸ್ಪಿ ಪ್ರಸ್ನ ದೇಸಾಯಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
**
‘ರಾಜಕೀಯ ಬೆರೆಸಬೇಡಿ’
ಇಂಡಿ: ‘40 ವರ್ಷಗಳ ಹಿಂದೆ ನಾಕರೆ ಅವರು ಸ್ಥಾಪಿಸಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡಿರಲಿಲ್ಲ. ಈ ಕಾರ್ಖಾನೆಯನ್ನು ಆರಂಭಿಸಲು ಕಳೆದ ಎರಡು ವರ್ಷಗಳಿಂದ ಹಗಲಿರುಳು ಶ್ರಮಿಸಿದ್ದೇನೆ. ಈ ಪ್ರಯತ್ನದಲ್ಲಿ ನನ್ನ ಶರೀರದ ಒಂದು ಅಂಗವನ್ನೇ ಕಳೆದುಕೊಳ್ಳಬೇಕಾಯಿತು. ರೈತರಿಗೆ ಸೇರಿದ ಈ ಕಾರ್ಖಾನೆಯ ಪುನರುಜ್ಜೀವನಕ್ಕೆ ₹ 189 ಕೋಟಿ ಖರ್ಚಾಗಿದೆ. ಹೀಗಾಗಿ ಇದರಲ್ಲಿ ಯಾರೂ ರಾಜಕೀಯ ಮಾಡ ಬಾರದು. ಕಾರ್ಖಾನೆಯನ್ನು ಪ್ರವೇಶಿ ಸುವಾಗ ರೈತರಾಗಿಯೇ ಬನ್ನಿ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭಾವುಕರಾಗಿ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.