ಹಾವೇರಿ: ಸತತ ಬರಕ್ಕೆ ತುತ್ತಾದ ಹಾವೇರಿಯಲ್ಲಿ ಸ್ವಯಂ ಪ್ರೇರಣೆಯಿಂದ ‘ನೀರಿನ ಅರಿವು’ ಮೂಡಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಈ ಪೈಕಿ ಹಾವೇರಿಯ ವಿದ್ಯಾನಗರದ ಪೂರ್ವ ಬಡಾವಣೆಯ ಮೊದಲ ಅಡ್ಡ ರಸ್ತೆಯಲ್ಲಿನ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ತಿರುಕಪ್ಪ ಬಸವಂತಪ್ಪ ಕುಲಕರ್ಣಿ ಪ್ರಮುಖರು. ಅವರು ‘ಜಲ ಸಂರಕ್ಷಣೆ’ ನಿಯಮಗಳನ್ನು ಸ್ವಂತ ಮನೆಗೆ ಅಳವಡಿಸಿಕೊಂಡಿದ್ದಾರೆ.
ತಮ್ಮ ಮನೆಯ ಚಾವಣಿ ನೀರು ಒಂದೆಡೆ ಇಳಿದು ಬರುವಂತೆ ಮಾಡಿದ್ದಾರೆ. ಹೀಗೆ ಬಂದ ನೀರನ್ನು ಸುಮಾರು ಮೂರು ಅಡಿ ಎತ್ತರದ ಶುದ್ಧೀಕರಣ ಘಟಕದ ಮೂಲಕ ಸೋಸಿ ನೆಲದಡಿಯ ಟ್ಯಾಂಕ್ಗೆ ಸೇರುವಂತೆ ಮಾಡಿದ್ದಾರೆ.
‘ಮೊದಲ ಮಳೆಯ ನೀರನ್ನು ಹೊರಗಡೆ ಬಿಡುತ್ತೇವೆ. ಬಳಿಕದ ನೀರನ್ನು ಫಿಲ್ಟರ್ ಮೂಲಕ ಸಂಪಿಗೆ ಬಿಡುತ್ತೇವೆ. ಆ ನೀರನ್ನು ಬಳಕೆ ಮಾಡುತ್ತೇವೆ. ಹೆಚ್ಚುವರಿ ನೀರನ್ನು ಇಂಗಲು ಬಿಡುತ್ತೇವೆ’ ಎನ್ನುತ್ತಾರೆ ತಿರುಕಪ್ಪ ಬಿ. ಕುಲಕರ್ಣಿ.
ಗಿಡಗಳಿಗೆ ಬಾಟಲ್ ನೀರು: ಮನೆ ಹಾಗೂ ಮನೆ ಮುಂದಿನ ರಸ್ತೆ ಬದಿ ಗಿಡಗಳನ್ನು ಹಾಕಿದ್ದಾರೆ. ಈ ಗಿಡಗಳಿಗೆ ಪ್ರತಿ ನಿತ್ಯ ಒಂದು ಬಿಂದಿಗೆ ಹಾಕುವುದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಗಿಡಗಳಿಗೂ ‘ಬಾಟಲ್’ನಿಂದ ನೀರು ಹಾಕುತ್ತಿದ್ದಾರೆ.
‘ಬೇಸಿಗೆಯಲ್ಲಿ ಗಿಡ ಬದುಕಲು ತಾಯಿ ಬೇರಿಗೆ ನೀರು ಸಿಕ್ಕರೆ ಸಾಕು. ಅದಕ್ಕಾಗಿ, ಕುಡಿದು ಎಸೆದ ವ್ಯರ್ಥ ನೀರಿನ ಬಾಟಲಿಗಳನ್ನು ಗಿಡದ ಬುಡಕ್ಕೆ ಕಟ್ಟಿದ್ದೇನೆ. ಆ ಬಾಟಲಿಯ ಕೆಳಗೆ ಹನಿ ಹನಿ ನೀರು ಜಿನುಗುವಂತೆ ತೂತು ಮಾಡಿದ್ದೇನೆ. ಈ ಬಾಟಲಿಗೆ ದಿನಕ್ಕೆರಡು ಬಾರಿ ನೀರು ತುಂಬಿಸುತ್ತೇನೆ’ ಎನ್ನುತ್ತಾರೆ ಅವರು.
ಜಾಗೃತಿ: ಇದರ ಜೊತೆಗೆ ಕುಲಕರ್ಣಿಯವರು ಜಲಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಪೈಕಿ ತಮ್ಮ ನಿವೇಶನಗಳಲ್ಲಿ ಇಂಗು ಗುಂಡಿ ಮಾಡಿಸಿಕೊಂಡ ಡಾ. ಜಗದೀಶ ಗೊಡ್ಡೆಮ್ಮಿ, ಗುರುಬಸಪ್ಪ ಬ. ಅಡರಕಟ್ಟಿ ಮತ್ತಿತರರು ಕುಲಕರ್ಣಿ ನೆರವನ್ನು ನೆನಪಿಸಿಕೊಳ್ಳುತ್ತಾರೆ.