ಮೈಸೂರು: ಜಿಲ್ಲೆಯ ನಂಜನಗೂಡು, ವರುಣಾ, ಸರಗೂರು, ಚಾಮರಾಜನಗರ ಜಿಲ್ಲೆಯ ಹಲವೆಡೆ, ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ಹಾಗೂ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದೆ.
ನಂಜನಗೂಡಿನಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಬಿರುಸಿನ ಮಳೆ ಒಂದು ಗಂಟೆ ಕಾಲ ಸುರಿಯಿತು. ತಾಲ್ಲೂಕಿನ ದೇಬೂರು, ಬ್ಯಾಳಾರು, ಹುಲ್ಲಹಳ್ಳಿ, ನವಿಲೂರು, ಹೆಗ್ಗಡಹಳ್ಳಿ, ದೇವಿರಮ್ಮನ ಹಳ್ಳಿ ಸೇರಿದಂತೆ ಕೆಲವು ಭಾಗಗಳಲ್ಲಿ ಮಳೆಯಾಯಿತು. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪನೆರೆಯಿತು.
ವರುಣಾ ಸಮೀಪದ ನಗರ್ಲೆ, ಬಿಳಿಗೆರೆ, ತಗಡೂರು, ಸುತ್ತೂರು ಭಾಗದಲ್ಲಿ ಬೆಳಿಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ನಂತರ, ಮಧ್ಯಾಹ್ನ 3 ಗಂಟೆಗೂ ಅಲ್ಪ ಮಳೆಯಾಯಿತು. ಈ ಭಾಗದಲ್ಲಿ ಈ ವರ್ಷದ ಎರಡನೇ ಮಳೆ ಇದಾಗಿದೆ.
ಸರಗೂರು ಪಟ್ಟಣದಲ್ಲಿ ಬೆಳಿಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು. ಬೆಳಿಗ್ಗೆ ಯಿಂದಲೇ ಪಟ್ಟಣದಲ್ಲಿ ಮೋಡ ಕವಿದ ವಾತಾವರಣ ಇತ್ತು. ಬಳಿಕ 8.15ಕ್ಕೆ ಆರಂಭವಾದ ಮಳೆ 9.20ರವರೆಗೂ 8.04 ಮಿ.ಮೀ. ಮಳೆ ಸುರಿಯಿತು. ಶಾಲೆಗೆ ತೆರಳುವ ಮಕ್ಕಳಿಗೆ ತೊಂದರೆಯಾಯಿತು.
ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಸುಕಿನ 4 ಗಂಟೆ ಯಿಂದಲೇ ಧಾರಾಕಾರ ಮಳೆ ಸುರಿ ಯಿತು. 4 ದಿನದ ಹಿಂದೆ ಸ್ವಲ್ಪ ಮಳೆಯಾ ಗಿದ್ದರಿಂದ ಕೃಷಿ ಚಟುವಟಿಕೆ ಚುರುಕು ಗೊಂಡಿತ್ತು. ಈಗ ಮತ್ತೆ ಮಳೆ ಯಾಗಿದ್ದು ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಸಂಜೆ ಗುಡುಗು, ಸಿಡಿಲಿನ ಆರ್ಭಟ ದೊಂದಿಗೆ ಅರ್ಧ ಗಂಟೆ ಕಾಲ ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಕಾಫಿ ತೋಟಗಳಿಗೆ ಮಳೆ ತಂಪೆರೆದಿದೆ.
ಸುಮಾರು 25 ಮಿ.ಮೀ ಮಳೆಯಾಗಿದ್ದು, ಸುತ್ತಮುತ್ತಲ ಗ್ರಾಮಗಳಾದ ನೆಲಜಿ, ಪೇರೂರು ಭಾಗದಲ್ಲೂ ಮಳೆಯಾಗಿದೆ. ಬೇಲೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳ ವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.