ಕನಕಪುರ: ಜನವಿರೋಧದ ನಡೆಯುವ ಕಸಾಯಿಖಾನೆ ನಿರ್ಮಾಣ ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ಮಾರ್ಚ್ 24ರಂದು ಹಾರೋಹಳ್ಳಿಯಲ್ಲಿ ಸಂಘಟಿತ ಹೋರಾಟವನ್ನು ಬೃಹತ್ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಮೇಕೆದಾಟು ಹೋರಾಟ ಸಮಿತಿಯ ಕಾರ್ಯದರ್ಶಿ ಸಂಪತ್ಕುಮಾರ್ ತಿಳಿಸಿದರು.
ನಗರದ ಮೇಕೆದಾಟು ಹೋರಾಟ ಸಮಿತಿ ಕಚೇರಿಯಲ್ಲಿ ಬುಧವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿ ರಾಘವೇಶ್ವರ ಭಾರತಿ ಸ್ವಾಮಿಗಳ ನೇತೃತ್ವದಲ್ಲಿ ಈ ಒಂದು ಹೋರಾಟವನ್ನು ಹಮ್ಮಿಕೊಂಡಿದ್ದು ರಾಜ್ಯದ ವಿವಿಧ ಮಠಗಳ 160 ಸ್ವಾಮೀಜಿಗಳು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಜೆ.ಡಿ.ಎಸ್. ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿ.ಜೆ.ಪಿ. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಸುರೇಶ್ಕುಮಾರ್, ಸಿ.ಟಿ.ರವಿ ಮೊದಲಾದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರೆಂದು ತಿಳಿಸಿದರು.
ಎಲ್ಲಾ ಕನ್ನಡ ಪರ ಸಂಘಟನೆಗಳು, ಸ್ತ್ರೀಶಕ್ತಿ ಸಂಘಟನೆ, ಮಹಿಳಾ ಸಂಘಟನೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆ ಮತ್ತು ಕೈಗಾರಿಕಾ ಕಂಪನಿ ಹಾಗೂ ಹೋಬಳಿ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭಾಗವಹಿಸಲಿವೆ. ಪ್ರತಿಭಟನೆಯಲ್ಲಿ ಸುಮಾರು 10 ಸಾವಿರ ಮಂದಿ ಸೇರಲಿದ್ದಾರೆ ಎಂದರು.
ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಪ್ರಾರಂಭವಾಗಲಿದೆ. ಕುಂಬಾರಸೆಡ್ಡುವಿನಿಂದ ಬಸ್ ನಿಲ್ದಾಣದ ವೃತ್ತದ ವರೆಗೂ ಸ್ವಾಮೀಜಿ ಮತ್ತು ಹೋರಾಟಗಾರರು ಕಾಲ್ನಡಿಗೆ ಮೂಲಕ ಮೆರವಣಿಗೆಯಲ್ಲಿ ಬರಲಿದ್ದಾರೆ. 1 ಗಂಟೆ ರಸ್ತೆ ತಡೆ ನಡೆಯಲಿದೆ. ಸಂಜೆ 4 ಗಂಟೆವರೆಗೂ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಹೇಳಿದರು.
ಕುಡಿಯುವ ನೀರು ಮತ್ತು ರೈತರ ವ್ಯವಸಾಯಕ್ಕೆ ಬೇಕಾದ ಮೇಕೆದಾಟು ಜಲಾಶಯ ನಿರ್ಮಾಣ ಮಾಡಬೇಕು, ಪರಿಸರಕ್ಕೆ ಹಾನಿಯಾಗುವ ಕಸಾಯಿಖಾನೆ ಬೇಡವೆಂದು ನಡೆಸುತ್ತಿರುವ ಈ ಹೋರಾಟಕ್ಕೆ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೊರಾಟಕ್ಕೆ ನೈತಿಕ ಬಲ ತುಂಬಬೇಕೆಂದು ಮನವಿ ಮಾಡಿದರು. ಹೋರಾಟ ಸಮಿತಿ ಖಜಾಂಚಿ ಬಿ.ಎಸ್.ಗೌಡ, ಸಾಹಿತಿ ಎಲ್ಲೇಗೌಡ ಬೆಸಗರಹಳ್ಳಿ, ರೈತ ನಾರಾಯಣಸ್ವಾಮಿ ಮತ್ತಿತರರಿದ್ದರು.