ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ:ಪ್ರಮಾಣ ಇಳಿಕೆಗೆ ಆಗ್ರಹಿಸಿ ಮನವಿ

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಈಚೆಗೆ ನವದೆಹಲಿಯಲ್ಲಿ ಮನವಿ ಸಲ್ಲಿಕೆ
Last Updated 23 ಮಾರ್ಚ್ 2017, 9:39 IST
ಅಕ್ಷರ ಗಾತ್ರ

ಬೆಳಗಾವಿ: ಸಹಕಾರ ಬ್ಯಾಂಕುಗಳಿಗೆ ಶೇ 25ರಷ್ಟು ಮಾತ್ರವೇ ಆದಾಯ ತೆರಿಗೆ ಅನ್ವಯಿಸುವಂತೆ ಆಗ್ರಹಿಸಿ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಸಂಘದಿಂದ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರಿಗೆ ನವದೆಹಲಿಯಲ್ಲಿ ಈಚೆಗೆ ಮನವಿ ಸಲ್ಲಿಸಲಾಯಿತು.

‘ಕೇಂದ್ರ ಬಜೆಟ್‌ಗೆ ಅನುಮೋದನೆ ಪಡೆಯುವ ಪೂರ್ವದಲ್ಲಿಯೇ ಈ ಕ್ರಮ ಕೈಗೊಳ್ಳಬೇಕು’ ಎಂದು ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಪಟ್ಟಣ ಸಹಕಾರಿ ಬ್ಯಾಂಕುಗಳ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

‘ಪ್ರಸ್ತುತ ಸಹಕಾರ ಬ್ಯಾಂಕುಗಳಿಗೆ ಶೇ 30ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಶೇ 25ಕ್ಕೆ ಇಳಿಸಬೇಕು. ಲಘು ಹಾಗೂ ಮಧ್ಯಮ ಉದ್ಯಮಗಳಂತೆಯೇ ಶೇ 25ರಷ್ಟು ಮಾತ್ರವೇ ಪಡೆಯಬೇಕು. ಪಟ್ಟಣ ಮತ್ತು ಉಪನಗರಗಳ ಹಂತದಲ್ಲಿ ಪ್ರಗತಿ ಪಥದಲ್ಲಿರುವ ಸಹಕಾರಿ ಬ್ಯಾಂಕುಗಳಿಗೆ ಆದಾಯ ತೆರಿಗೆಯ ಭಾರವನ್ನು ಕಡಿಮೆ ಮಾಡಬೇಕು.

ಮಧ್ಯಮ ಮತ್ತು ಕೆಳವರ್ಗದ ಕ್ಷೇತ್ರವನ್ನು ಆರ್ಥಿಕವಾಗಿ ಬಲಪಡಿಸಲು ಸಹಕಾರಿ ಬ್ಯಾಂಕುಗಳು ವಹಿಸುತ್ತಿರುವ ಪಾತ್ರವನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಬೇಕು’ ಎಂದು ಕೋರಲಾಯಿತು ಎಂದು ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಸಂಘದ ಅಧ್ಯಕ್ಷ ಬಾಳಪ್ಪ ಕಗ್ಗಣಗಿ ತಿಳಿಸಿದರು.

ಕೇಂದ್ರ ಸಚಿವ ಅಶೋಕ ಲವಾಸ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಎನ್.ಸಿ.ಪಿ. ಅಧ್ಯಕ್ಷ ಶರದ್‌ ಪವಾರ್‌ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.

ಸಂಘದ ಪದಾಧಿಕಾರಿಗಳಾದ ಬಾಳಾಸಾಹೇಬ ಕಾಕತಕರ, ಚಂದ್ರಕಾಂತ ಗುಂಡಕಲ್, ಮರಾಠಾ ಬ್ಯಾಂಕ ನಿರ್ದೇಶಕ ಲಕ್ಷ್ಮಣ ಹೊನಗೇಕರ, ಪ್ರಧಾನ ವ್ಯವಸ್ಥಾಪಕ ರವಿಕಿರಣ ಧುರಾಜಿ, ಬಸವೇಶ್ವರ ಬ್ಯಾಂಕ್‌ ಅಧ್ಯಕ್ಷ ವಿಜಯಕುಮಾರ ಅಂಗಡಿ, ದೈವಜ್ಞ ಬ್ಯಾಂಕ್‌ ಅಧ್ಯಕ್ಷ ಎಸ್.ಎಂ. ರೇವಣಕರ, ಪ್ರಧಾನ ವ್ಯವಸ್ಥಾಪಕ ಪಿ.ಎಸ್. ಸೇಠ, ಶಾಂತಪ್ಪಾಣ್ಣ ಮಿರ್ಜಿ ಬ್ಯಾಂಕ್‌ ಅಧ್ಯಕ್ಷ ಅಶೋಕ ದಾನವಾಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಭೋಜಕರ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT