ಬೆಂಗಳೂರು: ವಿಧಾನಮಂಡಲದ ಘನತೆ ಮತ್ತು ಗೌರವಕ್ಕೆ ಚ್ಯುತಿ ತರುವ ವರದಿ ಪ್ರಸಾರ ಮಾಡಿದೆ ಎಂದು ಆರೋಪಿಸಿ, ಬಿ.ಟಿ.ವಿ ಖಾಸಗಿ ಸುದ್ದಿ ವಾಹಿನಿ ವಿರುದ್ಧ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ ಗುರುವಾರ ಹಕ್ಕುಚ್ಯುತಿ ನೋಟಿಸ್ ನೀಡಿದರು.
‘ನೋಟಿಸ್ ಅನ್ನು ಹಕ್ಕುಭಾದ್ಯತಾ ಸಮಿತಿಗೆ ಒಪ್ಪಿಸಿ, ಆದಷ್ಟು ಬೇಗ ವರದಿ ಸಲ್ಲಿಸಲು ಸೂಚಿಸುತ್ತೇನೆ’ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಭರವಸೆ ನೀಡಿದರು.
‘ಬುಧವಾರ ಉಭಯ ಸದನಗಳಲ್ಲಿ ಮಾಧ್ಯಮಗಳ ಬಗ್ಗೆ ಚರ್ಚೆ ನಡೆದ ಬಳಿಕವೂ ಬಿ ಟಿ.ವಿ ವಾಹಿನಿ ಉಭಯ ಸದನಗಳ ಘನತೆ ಮತ್ತು ಗೌರವಕ್ಕೆ ಕುಂದುಂಟು ಮಾಡುವ ವರದಿ ಪ್ರಸಾರ ಮಾಡಿದೆ.
ರಾಜ್ಯ ಸರ್ಕಾರದ ನಾಲ್ಕು ವರ್ಷಗಳ ವೈಫಲ್ಯಗಳನ್ನು ಮುಚ್ಚಿ ಹಾಕಲು ಶಾಸಕರನ್ನು ಮಾಧ್ಯಮಗಳ ವಿರುದ್ಧ ಎತ್ತಿಕಟ್ಟಿದೆ ಎಂದು ವರದಿ ಪ್ರಸಾರ ಮಾಡಿದೆ’ ಎಂದು ಉಗ್ರಪ್ಪ ಆರೋಪಿಸಿದರು.
‘ಚಾನೆಲ್ನ ವರದಿಗಾರ, ಆ್ಯಂಕರ್ ಮತ್ತು ಮಾಲೀಕರನ್ನು ಸದನಕ್ಕೆ ಕರೆಸಬೇಕು. ಆ ಅಧಿಕಾರ ನಿಮಗಿದೆ. ಮಾಧ್ಯಮ ಮತ್ತು ಶಾಸಕರ ನಡುವಿನ ಸಂಘರ್ಷಕ್ಕೆ ತೆರೆ ಎಳೆಯಬೇಕು’ ಎಂದು ಉಗ್ರಪ್ಪ ಹೇಳಿದರು.