ಕಾರವಾರ: ಕಲಾವಿದ ಬಿಡಿಸುವ ಚಿತ್ರಗಳು ಕೇವಲ ಬಣ್ಣಗಳ ಮಿಶ್ರಣವಲ್ಲ. ಅವುಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಲಾಕೃತಿಗಳು. ಹೀಗಾಗಿ ಚಿತ್ರಕಲೆಗೆ ಹಾಗೂ ಕಲಾವಿದನಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಜಾನಪದ ಕಲಾವಿದೆ ಸುಕ್ರಿ ಬೊಮ್ಮು ಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಟ್ಯಾಗೋರ್ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಒಂದು ದಿನದ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೇಖಾ ಚಿತ್ರಗಳಲ್ಲಿಯೂ ಜೀವಂತಿಕೆಯನ್ನು ತುಂಬಬಲ್ಲ ಶಕ್ತಿ ಕಲಾವಿದನಿಗೆ ಮಾತ್ರ ಇದೆ ಎಂದು ಹೇಳಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ವಿ.ಎಂ.ಹೆಗಡೆ ಮಾತನಾಡಿ, ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಎಲ್ಲ ಚಿತ್ರಗಳೂ ಗಮನ ಸೆಳೆಯುತ್ತಿವೆ. ಕಲಾ ಕ್ಷೇತ್ರದಲ್ಲಿ ಇಂದು ಚಿತ್ರ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶಗಳಿದ್ದು, ಕಲಾವಿದರಿಂದ ಸಾಮಾಜಿಕ ಕಳಕಳಿಯ ಚಿತ್ರಗಳು ರಚನೆಯಾಗಬೇಕು ಎಂದು ಹೇಳಿದರು.
ಚಂದ್ರಕಾಂತ ಬಲೆಸಾರ ಮಾತನಾಡಿ, ಚಿತ್ರಕಲೆಯಿಂದ ಸಮಾಜಕ್ಕೆ ಉತ್ತಮ ಸಂದೇಶಗಳು ರವಾನೆಯಾಗಬೇಕು. ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗದೆ ಸ್ವ- ಇಚ್ಛೆಯಿಂದ, ಸ್ವಂತ ಕಲ್ಪನೆಯ ಮೂಲಕ ಚಿತ್ರಗಳನ್ನು ಬಿಡಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು.
ವಿದ್ಯಾರ್ಥಿ ಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೇ ಚಿತ್ರಕಲೆಯಂತಹ ಕಲಾಪ್ರಕಾರಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲೆ ಎನ್ನುವುದು ಬೇರೆಯವರು ನೀಡಿ ಬರುವ ವಿದ್ಯೆಯಲ್ಲ. ಅದು ನೈಸರ್ಗಿಕದತ್ತವಾದ ಕೊಡುಗೆ ಎಂದು ಹೇಳಿದರು. ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಆರ್.ನಾಯಕ, ರೋಹಿತ್ ಆಗೇರ, ಸರಿತಾ ಗೌಡ, ಜಾಫರ್ ಉಪಸ್ಥಿತರಿದ್ದರು.