ಮಡಿಕೇರಿ: ಆನೆಕಾಡು– ಅತ್ತೂರು ಮೀಸಲು ಅರಣ್ಯ ಪ್ರದೇಶ, ನಾಗರಹೊಳೆ, ತಿತಿಮತಿ, ಬ್ರಹ್ಮಗಿರಿ ಹಾಗೂ ಮಾವುಕಲ್ ಅರಣ್ಯದಲ್ಲಿ ಸಂಭವಿಸಿದ ಕಾಳ್ಗಿಚ್ಚು ಕುರಿತು ಸಿಬಿಐ ಮತ್ತು ಎನ್ಐಎ ಜಂಟಿ ತನಿಖೆ ನಡೆಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಅರಣ್ಯಕ್ಕೆ ಬೆಂಕಿಯಿಡುವ ಮೂಲಕ ದೇಶದ ವಿರುದ್ಧ ಪಿತೂರಿ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೀಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ಆನೆಕಾಡು– ಅತ್ತೂರು ರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚಿನಿಂದಾಗಿ 700 ಎಕರೆಯಷ್ಟು ಅರಣ್ಯ ನಾಶವಾಗಿದೆ. ವನ್ಯಜೀವಿಗಳು, ಸರೀಸೃಪಗಳು ಮತ್ತು ಪಕ್ಷಿಗಳ ಮಾರಣ ಹೋಮ ನಡೆದು ಭಾರಿ ನಷ್ಟ ಉಂಟಾಗಿದೆ. ಜಿಲ್ಲೆಯಾದ್ಯಂತ ಅರಣ್ಯಗಳಿಗೆ ಬೆಂಕಿಯಿಡುವ ಕೃತ್ಯ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ಅಗತ್ಯ ಎಂದು ಆಗ್ರಹ ಪಡಿಸಿದ್ದಾರೆ.