ಮಂಡ್ಯ: ಛತ್ರಪತಿ ಶಿವಾಜಿ ಪರಾಕ್ರಮಿಯಾಗಿ ಉತ್ತಮ ಆಡಳಿತ ನೀಡಿದ ಮಹಾನ್ ಚಕ್ರವರ್ತಿ. ಅವರ ಆದರ್ಶ ಮಾರ್ಗದಲ್ಲಿ ಇಂದಿನ ಯುವಜನರು ಸಾಗಬೇಕು ಎಂದು ಸಾಹಿತಿ ಎಚ್.ಎಸ್. ಮುದ್ದೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ನಗರದ ವಿಠ್ಠಲ ಭವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾನ್ಯ ಮನುಷ್ಯನಾಗಿದ್ದ ಶಿವಾಜಿ ಚಿಕ್ಕವಯಸ್ಸಿನಲ್ಲಿಯೇ ಕತ್ತಿ ವರಸೆ, ಕುದುರೆ ಸವಾರಿ, ಗೆರಿಲ್ಲಾ ಯುದ್ಧ ಕರಗತ ಮಾಡಿಕೊಂಡಿದ್ದನು. 16ನೇ ವಯಸ್ಸಿಗೆ ಮೂರು ಕೋಟೆ ವಶಪಡಿಸಿಕೊಂಡ ಮಹಾನ್ ವೀರನಾಗಿದ್ದನು ಎಂದರು.
ಆದಾಯ ತೆರಿಗೆ ಜಾರಿಗೆ ತಂದಿದ್ದನು. ಯುದ್ಧ ಸಂದರ್ಭದಲ್ಲಿ ರೈತರನ್ನು ಬಳಸಿಕೊಂಡು ಅವರಿಗೆ ವೇತನ ನೀಡಲಾಗುತ್ತಿತ್ತು. ಬೆಳೆನಷ್ಟಕ್ಕೂ ಪರಿಹಾರ ನೀಡಲಾಗುತ್ತಿತ್ತು. ಹಲವಾರು ಜನಪರ ಯೋಜನೆ ಜಾರಿಗೊಳಿಸಿದ್ದನು ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಮುಸ್ಲಿಂ ದೊರೆಗಳ ದಾಳಿಗೆ ತತ್ತರಿಸಿ ಅವನತಿ ಹಾದಿಯಲ್ಲಿದ್ದ ಹಿಂದೂ ಧರ್ಮ ರಕ್ಷಣೆ ಮಾಡಿದ ಕೀರ್ತಿ ಶಿವಾಜಿಯದ್ದಾಗಿದೆ. ಮುಸ್ಲಿಂ ಧರ್ಮ ಅಥವಾ ಯಾವುದೇ ಜನಾಂಗವನ್ನು ದ್ವೇಷಿಸದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದನು ಎಂದರು.
ಮಹಿಳೆಯರಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಕೊಟ್ಟು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಾತ್ಯಾತೀತ ಚಕ್ರವರ್ತಿಯಾಗಿದ್ದರು. ಅವರ ಆದರ್ಶ ಅಳವಡಿಸಿಕೊಂಡರೆ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಅರುಳ್ಕುಮಾರ್ ಮಾತನಾಡಿ, ಶಿವಾಜಿ ಮಿಲಿಟರಿ ಪಡೆ, ಆಡಳಿತ ಹಾಗೂ ಕಂದಾಯ ವ್ಯವಸ್ಥೆಯಲ್ಲಿ ಉತ್ತಮ ಸುಧಾರಣೆ ತಂದಿದ್ದರು. ಅಲ್ಲದೇ ಎಲ್ಲ ವರ್ಗಗಳಿಗೂ ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದರು.
ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಶಾಂತಮ್ಮ, ಲೋಕಪಾಲ್ ರಾವ್, ಬ್ಯಾಂಕ್ ವಿಜಿ, ಶಂಕರರಾಜ್, ಮೋಹನಕುಮಾರ್, ಜಾರ್ಜ್ ಇದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ವಿಠಲ ಭವನದವರೆಗೆ ಛತ್ರಪತಿ ಶಿವಾಜಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ವಿಳಂಬವಾದ ಕಾರ್ಯಕ್ರಮ: ಜಯಂತಿ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 12 ಕ್ಕೆ ಆರಂಭವಾಯಿತು.
ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಸೇರಿದಂತೆ ಬಹುತೇಕರು ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.