ನೋಯ್ಡಾ: ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಫೇಸ್ಬುಕ್ ಪುಟದಲ್ಲಿ ಅವಹೇಳನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ 22 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಸಿಎಂ ಆದಿತ್ಯನಾಥ ಸ್ಥಾಪಿಸಿರುವ ‘ಹಿಂದು ಯುವ ವಾಹಿನಿ’ ಯುವ ಸಮೂಹದ ಸದಸ್ಯರು 22 ವರ್ಷದ ರಾಹತ್ ಖಾನ್ ವಿರುದ್ಧ ದನ್ಕೌರ್ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು.
ದೂರಿನ ಮೇರೆಗೆ ಜನ್ ಸುವಿಧಾ ಕೇಂದ್ರ ನಡೆಸುವ ರಾಹತ್ ಖಾನ್ರನ್ನು ಗುರುವಾರ ಬಂಧಿಸಲಾಗಿದೆ.
ವಿರೂಪಗೊಳಿಸಿದ ಸಿಎಂ ಆದಿತ್ಯನಾಥ ಅವರ ಚಿತ್ರಗಳೊಂದಿಗೆ ‘ಯೋಗಿಯೋ, ಭೋಗಿಯೋ’ ಎನ್ನುವ ಬರಹಗಳನ್ನು ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದ್ದರು ಎನ್ನಲಾಗಿದೆ. ಐಟಿ ಕಾಯ್ದೆ 66ಎ ಅಡಿಯಲ್ಲಿ ರಾಹತ್ರನ್ನು ಬಂಧಿಸಲಾಗಿದೆ.
ನಮ್ಮ ಕುಟುಂಬ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಧಾನಿ ಮೋದಿ ಅವರಿಂದಲೂ ಪ್ರಶಂಸೆ ಪಡೆದಿದ್ದೇವೆ. ನನ್ನ ಮಗನ ಮೇಲೆ ಸುಳ್ಳು ಆರೋಪವರಿಸಲಾಗುತ್ತಿದೆ ಎಂದು ಖಾನ್ ತಾಯಿ ಆರೋಪಿಸಿದ್ದಾರೆ.