ಧರ್ಮಶಾಲಾ: ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಭಾರತ ತಂಡಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ.
ಮಾರ್ಚ್ 26ರಿಂದ ಬಾರ್ಡರ್– ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ಆರಂಭವಾಗಲಿದ್ದು, ಶೇ. 100 ರಷ್ಟು ಫಿಟ್ ಇದ್ದರೆ ಮಾತ್ರ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
‘ಇತರ ಆಟಗಾರರಂತೆ ತಂಡದಲ್ಲಿ ನಾನು ಒಬ್ಬ, ಆಟಕ್ಕೆ ಸಂಬಂಧಿಸಿದಂತೆ ಎಲ್ಲ ನಿಯಮಗಳು ನನಗೂ ಅನ್ವಯಿಸುತ್ತವೆ.
ದೈಹಿಕ ತರಬೇತುದಾರರು ಪರೀಕ್ಷೆಗಳನ್ನು ನಡೆಸುತ್ತಿದ್ದು, ಆಟದಲ್ಲಿ ಭಾಗಿಯಾದರೆ ಎದುರಾಗಬಹುದಾದ ಅಪಾಯಗಳ ಕುರಿತು ಅವರೇ ತಿಳಿಸುತ್ತಾರೆ. ನಾನು ಶೇ.100 ರಷ್ಟು ಫಿಟ್ ಆದರೆ ಮೈದಾನಕ್ಕಿಳಿಯುತ್ತೇನೆ ಎಂದಿದ್ದಾರೆ.