ಆಲೂರು: ಯಗಚಿ ನದಿ ನೀರಿಗೆ ಒಳಚರಂಡಿ ನೀರು ಸೇರಿ ಕಲುಷಿತವಾಗಿದ್ದು, ಕುಡಿಯಲು ಪೂರೈಕೆಗೆ ಯೋಗ್ಯವಲ್ಲ. ಜಿಲ್ಲಾಡಳಿತ ಈ ಕುರಿತು ಗಮನಹರಿಸಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಎಸ್ ಜಯಣ್ಣ ಒತ್ತಾಯಿಸಿದರು.
ಯಗಚಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಪಟ್ಟಣಕ್ಕೆ 2–3 ತಿಂಗಳು ಕುಡಿಯುವ ನೀರಿಗೆ ಸಮಸ್ಯೆಯಿಲ್ಲ ಎಂದು ಭಾವಿಸಿದ್ದೆವು. ಆದರೆ, ಈಗ ಒಳಚರಂಡಿ ನೀರು ಮಿಶ್ರಣವಾಗಿ ಆತಂಕ ಪಡುವಂತಾಗಿದೆ ಎಂದು ಹೇಳಿದರು.
ತಾಲ್ಲೂಕಿನ ಹುಣಸವಳ್ಳಿ ರಸ್ತೆಯ ಬಳಿ ನದಿ ನೀರಿಗೆ ಒಳಚರಂಡಿ ಸೇರುತ್ತಿರುವುದನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು. ಜೆ.ಡಿ.ಎಸ್ ತಾಲ್ಲೂಕು ಘಟಕದ ಕೆ.ಎಸ್ ಮಂಜೇಗೌಡ ಅವರು ಈ ಸಂದರ್ಭದಲ್ಲಿ ಇದ್ದರು.
ಮಂಜೇಗೌಡ ಅವರು, ಪಟ್ಟಣಕ್ಕೆ ಕುಡಿಯುವ ಉದ್ದೇಶಕ್ಕಾಗಿ ಯಗಚಿ ನದಿ ನೀರೇ ಪ್ರಮುಖ ಮೂಲ. ಒಂದು ವಾರದಿಂದ ನದಿ ನೀರು ಕೊಳಕಾಗಿದೆ. ವಾಸನೆ ಬೀರುತ್ತಿದೆ. ನದಿಗೆ ಕೆಲವೆಡೆ ಕಲುಷಿತ ನೀರು ಸೇರುತ್ತಿದೆ ಎಂದು ಹೇಳಿದರು.
ಬರಸ್ಥಿತಿ ಹಿನ್ನೆಲೆಯಲ್ಲಿ ಪಟ್ಟಣದ ಜನತೆಗೆ ಇತ್ತೀಚೆಗೆ ಬೇಲೂರು ಯಗಚಿ ಜಲಾಶಯದಿಂದ ನೀರು ಹರಿಸಲಾಗಿತ್ತು. ಈಗ ಅದೇ ತಾಲ್ಲೂಕಿನಿಂದ ಯಗಚಿ ನದಿ ನೀರಿಗೆ ಒಳಚರಂಡಿ ನೀರು ಸೇರುತ್ತಿರುವ ಶಂಕೆ ಇದೆ ಎಂದರು.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಮನಿಸಬೇಕು. ಕುಡಿಯುವ ಉದ್ದೇಶಕ್ಕೆ ಪೂರೈಸುವ ಮುನ್ನ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಎಸ್ ಜಯಣ್ಣ ಅವರು, ‘ಒಳಚರಂಡಿ ನೀರು ಸೇರ್ಪಡೆಯ ಪರಿಣಾಮ ಹುಣಸವಳ್ಳಿಯಿಂದ ದೊಡ್ಡಕಣಗಾಲು ಗ್ರಾಮಕ್ಕೆ ತೆರಳುವ ಜನರು ಮೂಗು ಮುಚ್ಚಿ ನಡೆಯುವಂತಾಗಿದೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ರಮ್ಯಾ ಗೋಪಿನಾಥ್, ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ್ ಪ.ಪಂ ಸದಸ್ಯರಾದ ಟಿ.ಕೆ.ಮಂಜುನಾಥ್, ಖಾಲೀದ್ ಪಾಷ, ಮುಖ್ಯಾಧಿಕಾರಿ ಮಂಜೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.