ಕೊಪ್ಪ : ಪರಿಸರ ಸಂರಕ್ಷಣೆ ಹೆಸರಿನಲ್ಲಿ ಮಲೆನಾಡಿಗರ ಮರಣ ಶಾಸನದಂತೆ ಸಿದ್ಧಪಡಿಸಿರುವ ಡಾ. ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಸರ್ಕಾರ ಕೂಡಲೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶನಿವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ಕರುವಾನೆ ನವೀನ್ ಮಾತನಾಡಿ, ‘ಪಶ್ಚಿಮಘಟ್ಟ ಪ್ರದೇಶದ ಜನರ ಬದುಕಿನ ಮೇಲೆ ಡಾ. ಕಸ್ತೂರಿ ರಂಗನ್ ವರದಿ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಕೊಪ್ಪ ತಾಲ್ಲೂಕಿನ 32, ನರಸಿಂಹ ರಾಜಪುರದ 35, ಶೃಂಗೇರಿ ತಾಲ್ಲೂಕಿನ 26 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಉಲ್ಲೇಖಿಸಿ ವರದಿ ಅನುಷ್ಠಾನಗೊಳಿಸುವುದನ್ನು ತಾಲ್ಲೂಕು ರೈತಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ವಿರೋಧಿಸುತ್ತದೆ’ ಎಂದರು.
ತಾಲ್ಲೂಕಿನ ಕೆಲಕುಳಿ, ಗುಣವಂತೆ, ಹಿರೇಕೊಡಿಗೆ, ಬೋಳಾಪುರ, ಭಂಡಿ ಗಡಿ, ಕೆಸವೆ, ಕುಂಬಾರಕೊಪ್ಪ, ದೇವರ ಹಳ್ಳಿ, ಕಗ್ಗ, ಹೊನಗಾರು, ತಲಮಕ್ಕಿ ಎಸ್ಟೇಟ್, ಅದ್ದಡ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರು, ಮರಿತೊಟ್ಲು, ಬಿಲಗದ್ದೆ, ಹೊಸೂರು, ಉಡಾಣ, ಮಸಿ ಕೊಪ್ಪ, ಕರಿಮನೆ, ಬೆಳವಾಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೇ ಬೈಲು, ಹೆಗ್ಗಾರು, ಹುಲಿಗರಡಿ, ದೇವ ಗೋಡು, ಹರಳಾನೆ, ಮೇಗೂರು, ಕಲ್ಲು ಗುಡ್ಡೆ ಗ್ರಾಮಗಳು ಪಶ್ಚಿಮಘಟ್ಟ ತಪ್ಪಲಿನ ಪುಟ್ಟ ಗ್ರಾಮಗಳಾಗಿದ್ದು, ಶತಮಾನಗಳಿಂ ದಲೂ ಜನವಸತಿಯಿಂದ ಕೂಡಿವೆ.
ಇಲ್ಲಿನ ಗ್ರಾಮಸ್ಥರು ತಲೆ ತಲಾಂತರದಿಂದ ತಮ್ಮ ಹಿಡುವಳಿ ಜಮೀನು, ಗೋಮಾಳ, ಸೊಪ್ಪಿನಬೆಟ್ಟ ಜಾಗದ ಅರಣ್ಯವನ್ನು ಪೋಷಿಸಿಕೊಂಡು ಬಂದಿದ್ದು, ಮಣ್ಣು, ಸೊಪ್ಪು, ದರಗು ಇತ್ಯಾದಿ ಅರಣ್ಯ ಉತ್ಪನ್ನಗಳನ್ನು ಕೃಷಿ ಕಾರ್ಯಗಳಿಗೆ ಬಳಸಿಕೊಂಡು, ಬೆಳೆದ ಉತ್ಪನ್ನದಲ್ಲಿ ತಾವೂ ಬದುಕಿ, ರಾಜ್ಯದ ಜನರಿಗೆ ಬದು ಕಲು ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆದುಕೊಡುತ್ತಾ ಬಂದಿದ್ದಾರೆ’ ಎಂದರು.
ಹಸಿರುಸೇನೆ ಅಧ್ಯಕ್ಷ ಚಿಂತನ್ ಬೆಳಗೊಳ, ಕ್ಷೇತ್ರಾಧ್ಯಕ್ಷ ಕೆ.ಸಿ. ಸತೀಶ್, ಆಮ್ ಆದ್ಮಿ ಮುಖಂಡ ಜುಬೇರ್ ಅಹಮ್ಮದ್, ರೈತ್ಸಂಘದ ಮುಖಂಡ ರಾದ ಶಿವಪುರ ಹರೀಶ್, ನಿಲುಗುಳಿ ನಾಗ ರಾಜ್, ಉಂಟುವಳ್ಳಿ ಪ್ರಸನ್ನ, ಅರಸಸಿ ಪರಮೇಶ್ವರ್ ಇದ್ದರು.
***
ಕಸ್ತೂರಿರಂಗನ್ ವರದಿ ಸಿದ್ಧಪಡಿ ಸುವಾಗ ಭೌತಿಕ ಸರ್ವೆ ನಡೆಸದೆ, ಉಪಗ್ರಹ ಆಧಾರಿತ ಸರ್ವೆ ನಡೆಸಿ, ಕೃಷಿ ಭೂಮಿಯನ್ನೂ ಅರಣ್ಯವೆಂದು ಪರಿಗಣಿಸಲಾಗಿದೆ.
ಕರುವಾನೆ ನವೀನ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ