ಕಗ್ಗತ್ತಲ ಹಾದಿಯಲ್ಲಿ
ಬೆಳಕಿನೆಡೆಗೆ ಬೆರಳ ದೊಂದಿ
ತೋರಿಸುತ್ತಾ ನಿಂತೇ
ಇರುವ ಸಂತ
ಸಮಾನತೆಗಾಗಿ
ವ್ಯವಸ್ಥೆಯೊಡನೆ ಹೋರಾಡುತ್ತಲೇ
ಇರುವ ಸಂವಿಧಾನ
ಹುಟ್ಟಿಗೇ ಹುಣ್ಣು ಅಂಟಿ
ಮಾಯದ ಗಾಯವಾಗಿ
ನರಳುತ್ತಿದ್ದ ಜೀವಗಳಿಗೆ ಮದ್ದು
ತೋರಿದ ಸಂಜೀವಿನಿ
ಯುಗಾಂತರ ದಮನಿತ ಆದಿಮ
ಕಣ್ಣುಗಳಲ್ಲಿ ಉರಿಯುತ್ತಲೇ
ಇರುವ ಉಲ್ಕೆ
ದಿಕ್ಕೆಟ್ಟ ಸಾವಿರಾರು ನದಿಗಳಿಗೆ
ನೆಲೆಯಾದ ಸ್ವಾಭಿಮಾನದ
ಅನಂತ ಕಡಲು
ನೆಲದಮರೆಯ ಬೇರುಗಳಿಗೂ
ಬೆಳಕ ಕಾಣಿಸಿದ
ಕಪ್ಪು ಸೂರ್ಯ
ಶತ ಶತಮಾನ ಹೆಪ್ಪುಗಟ್ಟಿದ ದುಃಖ
ಊರು ಕೆರೆ ಗುಡಿಗಡಿಯಾಚೆ ಉಳಿದವರ
ಹಟ್ಟಿಮೊಹಲ್ಲಾಗಳ ಮೇಲೆ
ಕಡಲಹನಿ ಹೊತ್ತುತಂದು ಸುರಿದ
ನೀಲಿಮಳೆ
ಸನಾತನ ಸ್ಥಾವರಗಳ ಬಿರುಕಿನಲ್ಲಿ
ಚಿಗುರಿದ ಬೋಧಿವೃಕ್ಷ
ಬೇಲಿಸಾಲಿನ ಹೂಗಳ ತಂದು
ಬುದ್ಧನಿಗೆ ಅರ್ಪಿಸಿದ ಮಹಾಯಾನಿ
–ಹಂದಲಗೆರೆ ಗಿರೀಶ್