ತಿಪಟೂರು: ಅಕ್ಕಮಹಾದೇವಿ ತನ್ನ ವೈಚಾರಿಕತೆಯಿಂದ ಯೋಗಿತರಂಗಿಣಿಯಾಗಿ ಅಧ್ಯಾತ್ಮದ ಚಿಲುಮೆಯಂತೆ ಸಮಾಜದಲ್ಲಿ ಬೆಳಕು ಚೆಲ್ಲುವಂತಹ ಅನೇಕ ಉತ್ತಮ ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ನಗರದ ಪಿ.ಜಿ.ಎಂ.ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಅಕ್ಕಮಹಾದೇವಿಯ ಸಮಾಜದಿಂದ ಈಚೆಗೆ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಹನ್ನೆರಡನೇ ಶತಮಾನದ ಶರಣ, ಶರಣೆಯರ ವಿಚಾರಗಳು ಸಮಾಜಕ್ಕೆ ದಾರಿ ದೀಪವಾಗಿವೆ. ಸಾಮಾಜಿಕ ಮೌಲ್ಯಗಳನ್ನು ಇಂದಿಗೂ ಎತ್ತಿ ಹಿಡಿಯುತ್ತವೆ. ಅವರ ನೂರಾರು ವಚನಗಳು ಮಾರ್ಗದರ್ಶನ ನೀಡುತ್ತವೆ. ಮಹಿಳೆಯರು ಕೂಡ ಪುರುಷರ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬಲ್ಲಳು ಎಂಬುದನ್ನ ಅಕ್ಕಮಹಾದೇವಿ ನಿರೂಪಿಸಿದ್ದಾಳೆ. ಮಹಿಳೆಯರ ಬದುಕಿಗೆ ಆದರ್ಶ ಪ್ರಾಯಳಾಗಿದ್ದಾಳೆ’ ಎಂದರು.
ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಸಾರ್ಥವಳ್ಳಿ ಶಿವಕುಮಾರ್ ಮಾತನಾಡಿ, ‘ಅಕ್ಕನ ವಚನಗಳು ಇಂದಿನ ಸಮಾಜಕ್ಕೂ ವಾಸ್ತವ. ಸಿರಿ ಬರಲಿ, ಉರಿ ಬರಲಿ ಮನುಷ್ಯ ಬದುಕಿನಲ್ಲಿ ಒಂದೇ ಸಮನಾಗಿ ನಡೆಯಬೇಕು’ ಎಂದರು.
‘ಒಳ್ಳೆಯವರ ಒಡನಾಟದಲ್ಲಿದರೆ ಬದುಕು ಸುಂದರವಾಗಿರುತ್ತದೆ. ಒಳ್ಳೆಯ ವಿಚಾರಗಳು ಎಲ್ಲರ ಬದುಕಿಗೆ ಅವಶ್ಯಕ. ಅಕ್ಕಮಹಾದೇವಿಯ ನೂರಾರು ವಚನಗಳ ಸಾರ ವಿಸ್ತಾರವಾಗಿದೆ. ಸ್ನೇಹ, ಪ್ರೀತಿ, ವಿಶ್ವಾಸ ಮೂಡಿದರೆ ಬದುಕನ್ನು ಸಾರ್ಥಕವಾಗಿಸಿಕೊಳ್ಳಬಹುದು ಎಂಬುದು ಅಕ್ಕನ ವಿಚಾರಧಾರೆಗಳಲ್ಲಿವೆ’ ಎಂದರು.
ಸೌರಭ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಆಶಾಕಿರಣ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷೆ ಸಿದ್ದಗಂಗಮ್ಮ ಇದ್ದರು. ಹೇಮಾ ಬಸವರಾಜು ಸಂಗಡಿಗರು ವಚನಗಾಯನ ನಡೆಸಿಕೊಟ್ಟರು.