ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶವಮೂರ್ತಿ ಕೈ ಹಿಡಿದ ಅನುಕಂಪ

Last Updated 13 ಏಪ್ರಿಲ್ 2017, 10:18 IST
ಅಕ್ಷರ ಗಾತ್ರ

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು ಮೀಸಲು ಕ್ಷೇತ್ರದಲ್ಲಿ ಅನುಕಂಪದ ಜತೆಗೆ ‘ವ್ಯವಸ್ಥಿತ' ಚುನಾವಣೆಯು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನು ಗೆಲುವಿನ ದಡ ಸೇರಿಸಿದೆ.

ಸತತ ಎರಡು ಬಾರಿಯ ಸೋಲಿನಿಂದ ಗಳಿಸಿದ್ದ ಅನುಕಂಪ ಹಾಗೂ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್ ಆಡಳಿತ ವಿರೋಧಿ ಅಲೆ ಈ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಪ್ರಸಾದ್ ಅವರ ‘ಸ್ವಾಭಿಮಾನ’ಕ್ಕೆ ಆದ ಧಕ್ಕೆಯಂತಹ ಭಾವನಾತ್ಮಕ ವಿಚಾರದ ಎದುರು ಕೇಶವಮೂರ್ತಿ ಅವರ ‘ಸ್ವಾಭಿಮಾನದ’ ನಡೆ ಮತದ ಬುಟ್ಟಿಯನ್ನು ತುಂಬಿಸಿದೆ. ಆಡಳಿತಾರೂಢ ಕಾಂಗ್ರೆಸ್ ‘ಶಕ್ತಿ’ ಮತ್ತು ‘ಸಂಪನ್ಮೂಲದ’ ಹರಿವು ಗೆಲುವಿನ ಅಂತರವನ್ನು ಹೆಚ್ಚು ಮಾಡಿದೆ.

ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷವಾಗಿ ಬೆಂಬಲ ನೀಡಿದೆ. ಕಾಂಗ್ರೆಸ್– ಜೆಡಿಎಸ್ ಮತಗಳು ಒಟ್ಟುಗೂಡಿದ್ದು ಜಯದ ದಾರಿಯನ್ನು ಸುಗಮಗೊಳಿಸಿದೆ. ಪ್ರಸಾದ್ ರಾಜೀನಾಮೆ ನಂತರ ಕ್ಷೇತ್ರಕ್ಕೆ ಹರಿದುಬಂದ ಅನುದಾನ, ಅಭಿವೃದ್ಧಿಯ ಬೀಜ ಬಿತ್ತನೆ, ಸಾಲ ವಿತರಣೆ ಸಹ ಮತದಾರರನ್ನು ಸ್ವಲ್ಪಮಟ್ಟಿಗೆ ತನ್ನತ್ತ ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ.

ಶ್ರೀನಿವಾಸ ಪ್ರಸಾದ್ ಅವರ ಮೇಲಿನ ಆಡಳಿತ ವಿರೋಧಿ ಅಲೆ ದಿನದಿಂದ ದಿನಕ್ಕೆ ಬಲವಾಗುತ್ತಿದ್ದರೂ ಅದನ್ನು ತಣ್ಣಗೆ ಮಾಡುವ ಪ್ರಯತ್ನವನ್ನು ಯಾರೊಬ್ಬರೂ ಮಾಡಲಿಲ್ಲ. ಈ ಉಪೇಕ್ಷೆಗೆ ಈಗ ಭಾರಿ ಬೆಲೆ ತೆರಬೇಕಾಗಿದೆ. ಕ್ಷೇತ್ರದ ಜನತೆ ಕೈಬಿಡುವುದಿಲ್ಲ ಎಂಬ ಅಪಾರವಾದ ನಂಬಿಕೆ, ಗೆದ್ದೇ ಗೆಲ್ಲುತ್ತೇವೆ ಎಂಬ ಅತ್ಯುತ್ಸಾಹವೇ ಅವರನ್ನು ಸೋಲಿನ ದವಡೆಗೆ ದೂಡಿತು.

ಸಂಸದರಾಗಿ, ಕೇಂದ್ರ ಸಚಿವರಾಗಿ, ಎರಡು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದರೂ (ಜತೆಗೆ ಜಿಲ್ಲಾ ಉಸ್ತುವಾರಿ) ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂಬ ಸಿಟ್ಟಿಗೆ ಕ್ಷೇತ್ರದ ಜನತೆ ಉತ್ತರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಸ್ವಾಭಿಮಾನ’ದ ವಿಚಾರ ಬಂದಾಗ ದಲಿತರು ಇಡಿಯಾಗಿ ಕೈಹಿಡಿಯುತ್ತಾರೆ ಎಂಬ ಲೆಕ್ಕಾಚಾರ ಸಹ ಸುಳ್ಳಾಯಿತು. ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಲಿಂಗಾಯತ ಸಮುದಾಯದ ಮತಗಳು ಹರಿದು ಬರುತ್ತವೆ ಎಂಬ ಎಣಿಕೆ ಸಹ ತಪ್ಪಾಯಿತು. ಯಡಿಯೂರಪ್ಪ ಅವರ ಮೇಲಿನ ಪ್ರೀತಿಗಿಂತ ಶ್ರೀನಿವಾಸ ಪ್ರಸಾದ್ ಅವರ ಮೇಲಿನ ಸಿಟ್ಟು ಹೆಚ್ಚು ಕೆಲಸ ಮಾಡಿರುವುದು ಫಲಿತಾಂಶದಲ್ಲಿ ವ್ಯಕ್ತವಾಗುತ್ತದೆ. ದಲಿತರ ಮತಗಳು ಚದುರಿದ್ದು, ಎರಡುವರೆ ದಶಕದ ನಂತರ ಬದನವಾಳು ಘಟನೆಯನ್ನು ಮುಂದಿಟ್ಟುಕೊಂಡು ಲಿಂಗಾಯತ ಸಮಯದಾಯದವರು ತಮ್ಮ ಸಿಟ್ಟು ತೋರ್ಪಡಿಸಿದ್ದು ಪ್ರಸಾದ್ ಅವರ ಸೋಲಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿ.ಎಸ್.ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಮತಗಳನ್ನು ತಂದುಕೊಡುತ್ತಾರೆ. ತನ್ನ ಶಕ್ತಿ ಬಳಸಿ ದಲಿತರ ಮತಗಳನ್ನು ಸೆಳೆಯಬಹುದು. ಒಟ್ಟು ಮತದಾರರಲ್ಲಿ ಸುಮಾರು ಅರ್ಧದಷ್ಟು ಇರುವ ಈ ಎರಡೂ ಸಮುದಾಯದ ಮತಗಳು ಒಗ್ಗೂಡಿದರೆ ಹಾಗೂ ಇತರ ಸಮುದಾಯದ ಸ್ವಲ್ಪ ಮಟ್ಟಿನ ಮತಗಳು ಬಂದರೆ ಗೆಲುವು ಕಷ್ಟಕರವಾಗಲಾರದು. ಇಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನತೆ ಕೈಬಿಡುವುದಿಲ್ಲ. ಈ ಬಾರಿಯ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಇದೊಂದುಬಾರಿ ಗೆಲ್ಲಿಸಿಕೊಡಿ ಎಂದು ಪ್ರಸಾದ್ ಮಾಡಿದ ಮನವಿಗೂ ಮತದಾರರು ಕಿವಿಗೊಟ್ಟಿಲ್ಲ.

ಪ್ರಸಾದ್ ಅವರ ಅನಾರೋಗ್ಯ, ಪ್ರಚಾರದಿಂದ ಹಿಂದೆ ಉಳಿದಿದ್ದು, ಸಾಕಷ್ಟು ಸಮಯಾವಕಾಶ ಇದ್ದರೂ ಎಲ್ಲಾ ಹಳ್ಳಿ, ಮತದಾರರನ್ನು ತಲುಪಲು ಸಾಧ್ಯವಾಗದಿರುವುದು ಮತ್ತಿತರ ಬಹಳಷ್ಟು ನಕಾರಾತ್ಮ ಅಂಶಗಳೇ ಸೋಲಿಗೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT