ಲಕ್ಷ್ಮೇಶ್ವರ: ಈರುಳ್ಳಿ ನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಈರುಳ್ಳಿ ಯನ್ನು ಪ್ರತಿ ವರ್ಷ ತಾಲ್ಲೂಕಿನ ಸಾವಿ ರಾರು ಹೆಕ್ಟೇರ್ನಲ್ಲಿ ರೈತರು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಈರುಳ್ಳಿ ಉತ್ತಮ ತಳಿಯಾಗಿದೆ. ಹೀಗಾಗಿ, ಇಲ್ಲಿನ ಈರುಳ್ಳಿ ಬೀಜಕ್ಕೆ ರಾಜ್ಯದಾದ್ಯಂತ ಬೇಡಿಕೆ ಇದೆ.
ಹೀಗಾಗಿ, ಕೆಲ ರೈತರು ಈರುಳ್ಳಿ ಬೀಜ ಸಿದ್ಧಪಡಿಸಿ ಅದನ್ನು ಮಾರಾಟ ಮಾಡುವುದನ್ನೇ ಪ್ರಮುಖ ಉದ್ಯೋಗವನ್ನಾಗಿ ಮಾಡಿಕೊಂಡವರಿದ್ದಾರೆ. ಅಂಥವರಲ್ಲಿ ಸಮೀಪದ ಬಟ್ಟೂರು ಗ್ರಾಮದ ಚೆನ್ನವೀರಪ್ಪ ಬಟ್ಟೂರು ಪ್ರಮುಖರು.
ಚೆನ್ನವೀರಪ್ಪನವರು ಪ್ರತಿ ವರ್ಷ ಸುಮಾರು ಒಂದರಿಂದ ಒಂದೂವರೆ ಕ್ವಿಂಟಲ್ನಷ್ಟು ಈರುಳ್ಳಿ ಬೀಜ ಬೆಳೆದು ಮಾರಾಟ ಮಾಡಿ ಅದರಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗ್ರಾಮದ ಹಳ್ಳದ ನೀರನ್ನು ಬಳಸಿಕೊಂಡು ತಮ್ಮ ಅರ್ಧ ಎಕರೆ ಹೊಲದಲ್ಲಿ ಇವರು ಬೀಜ ಕ್ಕಾಗಿಯೇ ಈರುಳ್ಳಿಯನ್ನು ಬೆಳೆಯುತ್ತಿ ದ್ದಾರೆ. ಹೀಗೆ ಬೆಳೆದ ಬೀಜವನ್ನು ಬೆಂಗ ಳೂರು ಹತ್ತಿರದ ಅಜ್ಜಂಪುರದ ರೈತರಿಗೆ ಕಳೆದ ನಾಲ್ಕೈದು ವರ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ. ಹೋದ ವರ್ಷ 500 ರೂಪಾಯಿಗೆ ಕೆಜಿಯಂತೆ ಈರುಳ್ಳಿ ಬೀಜ ಮಾರಾಟ ಮಾಡಿ ಅದರಿಂದ ₹ 1.10 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.
‘ನಾಲ್ಕೈದು ವರ್ಷದಿಂದ ಉಳ್ಳಾಗಡ್ಡಿ ಬೀಜ ಮಾರಾಟ ಮಾಡಾತೇವ್ರೀ. ದೂರದ ಅಜ್ಜಂಪುರದ ರೈತರು ಫೋನ್ ಮಾಡಿ ಬೀಜ ಬೇಕಂತ ಹೇಳ್ತಾರ. ಒಂದೊಂದ ಸಲಾ ಅವರ ಊರಿಗೆ ಬಂದು ಬೀಜಾ ತಗೊಂಡ ಹೊಕ್ಕಾರ್ರೀ. ಹ್ವಾದ ವರ್ಷಾ ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಬೀಜ ಮಾರೇವ್ರೀ’ ಎಂದು ರೈತ ಚೆನ್ನವೀರಪ್ಪ ಹೇಳುತ್ತಾರೆ.
‘ಇದಲ್ಲದೆ, ನವಲಗುಂದ ತಾಲ್ಲೂಕಿನ ರೈತರೂ ನಮ್ಮಲ್ಲಿನ ಬೀಜ ಖರೀದಿ ಮಾಡ್ತಾರ್ರೀ’ ಎನ್ನುತ್ತಾರೆ ಅವರು.ಬರಗಾಲ ಎಂದು ಕೈ ಚೆಲ್ಲಿ ಕುಳಿತು ಕೊಳ್ಳುವ ರೈತರಿಗೆ ಇವರು ಪರ್ಯಾಯ ಉದ್ಯೋಗ ಕೈಗೊಳ್ಳುವ ಮೂಲಕ ಇವರು ಮಾದರಿ ಆಗಿದ್ದಾರೆ.