ರಿಪ್ಪನ್ಪೇಟೆ: ‘ಜ್ಞಾನ ಸಂಪಾದನೆಯಿಂದ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು’ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು.
ಪಟ್ಟಣ ಸಮೀಪದ ಕಣಬಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.
‘ಇಂದಿನ ಯುವ ಜನತೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಪ್ರಾಪಂಚಿಕ ಜ್ಞಾನ ಅರಿಯಲು ಓದು ಮುಖ್ಯ. ಗಾಂಧೀಜಿ, ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜೀವನ ಮೌಲ್ಯಗಳು ಬದುಕಿಗೆ ಮಾರ್ಗಸೂಚಿ ಯಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.
ಪತ್ರಕರ್ತ ಲಕ್ಷ್ಮಣ್ ಕೊಡಸೆ ಮಾತನಾಡಿ, ‘ಶ್ರಮ ಸಂಸ್ಕತಿ ಜೀವನಕ್ರಮದಲ್ಲಿ ನಂಬಿಕೆ, ವಿಶ್ವಾಸ , ಗುರು ಹಿರಿಯರಲ್ಲಿ ಭಯ ಭಕ್ತಿ ನೆಲೆಸಿತ್ತು’ ಎಂದರು.
‘ ಆ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಿತ್ತು. ಇಂದು ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಸೊರಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ‘ಸುಶಿಕ್ಷಿತ ಗ್ರಾಮದಲ್ಲಿ ಗುಡಿ ಹಾಗೂ ಶಾಲೆಗಳು ಎರಡು ಕಣ್ಣುಗಳಿ ದ್ದಂತೆ. ಸುಸಂಸ್ಕೃತ ಸಮಾಜ ನಿರ್ಮಾ ಣಕ್ಕೆ ಇವು ಗಟ್ಟಿ ಬೇರುಗಳು’ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ,‘ ರಾಜ್ಯದಲ್ಲಿ ಶತಮಾನ ಕಂಡ ಕೆಲವೇ ಶಾಲೆಗಳಲ್ಲಿ ಈ ಶಾಲೆ ಸೇರ್ಪಡೆಗೊಂಡಿ ರುವುದು ಶ್ಲಾಘನೀಯ ಗುಣಾತ್ಮಕ ಶಿಕ್ಷಣದಿಂದ ಅನೇಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ವೇತಾ ಬಂಡಿ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಬಹುಮಾನ ವಿತರಿಸಿದರು.
ತಾಲ್ಲೂಕು ಪಂಚಾಯ್ತಿಅಧ್ಯಕ್ಷ ವಾಸಪ್ಪಗೌಡ ಶಾಲಾ ಧ್ವಜಸ್ತಂಭ ಉದ್ಘಾಟಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭೋಜಪ್ಪ ಹಾಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ, ಹಳೆ ವಿದ್ಯಾರ್ಥಿಗಳನ್ನು ಸನ್ಮಾ ನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಕೆ.ಕೆ. ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.
ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ಬಸಪ್ಪ, ಉಪಾಧ್ಯಕ್ಷೆ ಹೇಮಾ ನಾಗರಾಜ್ ಮತ್ತು ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಶಿಕ್ಷಕ ಜಗದೀಶ ಕಾಗಿನೆಲೆ, ಸಿಆರ್ಪಿ ಹರೀಶ್ ಇದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಿಕ್ಷಕ ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.