ಕೊಪ್ಪಳ: ಗುರುವಿಲ್ಲದೆ ಸಾಕ್ಷಾತ್ಕಾರ ಪಡೆಯುತ್ತೇವೆ ಎಂದು ಹೋದ ಎಲ್ಲರು ವಿಫಲರಾಗಿದ್ದಾರೆ. ಯಶಸ್ಸಿಗೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ. ಹರನಿಗಿಂತ ಗುರು ಶ್ರೇಷ್ಠ ಎಂದು ಬೀದರ್ನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣಾ ತಾಯಿ ಹೇಳಿದರು.
ನಗರದ ಸಾರ್ವಜನಿಕ ಮೈದಾನದಲ್ಲಿ ಭಾನುವಾರ ನಡೆದ 3ನೇ ದಿನದ ಜೀವನದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುವಿನ ಆಯ್ಕೆ ಜಟಿಲವಾಗಿದೆ. ಶರಣರು ಸಾವನ್ನು ಗೆದ್ದವರು. ಅವರ ಮಾರ್ಗದರ್ಶನ ಪಡೆದು ಜೀವನದಲ್ಲಿ ಮುಕ್ತಿ ಪಡೆಯಬಹುದಾಗಿದೆ ಎಂದರು.
ದೇಶದ ಹೆಣ್ಣು ಮಕ್ಕಳಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಅವರು ಅನುಸರಿಸುತ್ತಿರುವ ಧಾರ್ಮಿಕ ಉಪವಾಸ ಕಾರಣ. ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಉಪವಾಸ ಕೈಗೊಳ್ಳಬೇಕೆ ಹೊರತು. ಧಾರ್ಮಿಕ ದೃಷ್ಟಿಯಿಂದ ಅಲ್ಲ ಎಂದು ಅವರು ಹೇಳಿದರು.
ಹರಕೆ ಅಜ್ಞಾನದ ಸಂಕೇತ. ಪ್ರಸ್ತುತ ಅಜ್ಞಾನದಿಂದ ಕೂಡಿದ ವರ್ಗ ಒಂದು ಕಡೆಯಾದರೆ. ಅನಾಚಾರದಿಂದ ಕೂಡಿದ ವರ್ಗ ಇನ್ನೊಂದು ಕಡೆ ಇದೆ. ಶರಣರು ಹೇಳಿದಂತೆ ಅರಿವಿಲ್ಲದ ಆಚಾರ ನಿಷ್ಪ್ರಯೋಜಕ. ಅರಿವಿನಿಂದ ಕೂಡಿದ ಆಚಾರ ಸತ್ವಯುತವಾದದ್ದು. ಈ ನಿಟ್ಟಿನಲ್ಲಿ ನಾವೆಲ್ಲ ಅರಿವು ಮೈಗೂಡಿಸಿಕೊಳ್ಳಬೇಕಿದೆ ಎಂದರು.