ಶಹಾಪುರ: ‘ತಾಲ್ಲೂಕಿನ ಸಗರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿನ ಸಮಸ್ಯೆಯಿಂದ ಪರದಾಡುವಂತಾಗಿದೆ. ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ’ ಎಂದು ಗ್ರಾಮದ ರೈತ ಮುಖಂಡ ಮಲ್ಲರಡ್ಡೆಪ್ಪ ದೂರಿದ್ದಾರೆ.
‘ಸಗರ ದೊಡ್ಡ ಗ್ರಾಮವಾಗಿದೆ. 15 ಹಳ್ಳಿಗಳ ಕೇಂದ್ರ ಸ್ಥಾನ ಇದಾಗಿದೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಕನಿಷ್ಠ ಸೌಲಭ್ಯಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ವೈದ್ಯರು ವಾರಕ್ಕೊಮ್ಮೆ ಬಂದು ಸಹಿ ಹಾಕಿ ಹೋಗುತ್ತಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ತುರ್ತು ಚಿಕಿತ್ಸೆ, ಹೆರಿಗೆಗೆ ಬರುವವರಿಗೆ ಬಹಳ ಸಮಸ್ಯೆಯಾಗಿದೆ. ಪ್ರಾಥಮಿಕ ಚಿಕಿತ್ಸೆಯೂ ಲಭಿಸುತ್ತಿಲ್ಲ’ ಎಂದು ಮಲ್ಲರಡ್ಡೆಪ್ಪ ಆರೋಪಿಸಿದರು.
‘ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ತ್ಯಾಜ್ಯ ಎಸೆಯಲಾಗಿದೆ. ಈ ಸ್ಥಳ ರೋಗ ಉತ್ಪತ್ತಿ ಮಾಡುವ ತಾಣವಾಗಿದೆ’ ಎಂದು ರಾಜ್ಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶಗೌಡ ಸುಬೇದಾರ ಮನವಿ ಮಾಡಿದ್ದಾರೆ.
‘ಹೊರರೋಗಿಗಳಿಗೆ ಕುಡಿಯಲು ಹಾಗೂ ಸ್ವಚ್ಛತೆಗೆ ನೀರಿನ ಅವಶ್ಯವಿದೆ. ಪ್ರತಿತಿಂಗಳು ಇಲ್ಲಿ 25ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿವೆ. ಹೀಗಾಗಿ ತ್ವರಿತವಾಗಿ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗೆ ಮನವಿಪತ್ರ ಬರೆಯಲಾಗಿದೆ’ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದರು.