ಶಿಗ್ಗಾವಿ: ಮಲೆನಾಡಿನ ಸೀಮೆಗೆ ಹೊಂದಿಕೊಂಡಿರುವ ತಾಲ್ಲೂಕಿನ ತಡಸ ಗ್ರಾಮದಲ್ಲಿ ಮಂಗಳವಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ಸಡಗರ ಸಂಭ್ರಮದಿಂದ ಜರುಗಿತು. ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಸುಮಾರು 16 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹಗಳು ಜರುಗಿದವು. ಪುರವಂತರಿಂದ ಗುಗ್ಗುಳೋತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು. ಮಳಲಿ ಪುರವಂತರು ಹೇಳುವ ವೀರಭದ್ರೇಶ್ವರ ಕುರಿತು ಹಾಗೂ ವಿವಿಧ ದೇವರ ಚರಿತ್ರೆಗಳನ್ನು ಮಂತ್ರೋಪದೇಶಗಳು ಸೇರಿದ ಭಕ್ತ ಸಮೂಹದಲ್ಲಿ ಭಕ್ತಿಯ ಪರಾಕಾಷ್ಟೆ ಮೂಡಿಸಿತು.
ಸುಮಂಗಲಿಯರಿಂದ ವೀರಭದ್ರೇಶ್ವರ ಮೂರ್ತಿಗೆ ತೊಟ್ಟಿಲೋತ್ಸವ ಕಾರ್ಯಕ್ರಮ ಭಕ್ತಿಯಿಂದ ನೆರವೇರಿಸಲಾಯಿತು. ನಂತರ ನಡೆದ ರಥೋತ್ಸವಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತ ಸಮೂಹ ಹಣ್ಣುಕಾಯಿ, ಹೂಮಾಲೆಯಿಂದ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ರಥೋತ್ಸವ ಸಂಚರಿಸಿತು. ಅದರಲ್ಲಿ ಪಾಲ್ಗೊಂಡ ಭಕ್ತ ಸಮೂಹ ಭಕ್ತಿಯಿಂದ ಜಯಘೋಷ ಹಾಕಿದರು.
ಜಾತ್ರೆಯಲ್ಲಿ ಮಹಿಳೆಯರಿಂದ ಕುಂಭಮೇಳ, ತಬಕದ ಹೊನ್ನಳ್ಳಿ ತಂಡದ ಬಸವ ಕುಣಿತ, ತಡಸದ ಬೀರಲಿಂಗ ಸಂಘದಿಂದ ಡೊಳ್ಳಿನ ಮೇಳ, ದೇವರ ಹೊಸಪೇಟೆ ಜಾಂಜಮೇಳ, ಸೂರಶೆಟ್ಟಿಕೊಪ್ಪದ ಕರಡಿ ಮೇಳ, ಶಹನಾಯಿ, ಹುಬ್ಬಳ್ಳಿ ಸುಳ್ಳದ ಜಗ್ಗಲಿಗೆ ಮೇಳ ಸೇರಿದಂತೆ ಅನೇಕ ರೂಪಕಗಳು ವಿವಿಧ ವಾದ್ಯ ವೃಭವದೊಂದಿಗೆ ಜರುಗಿದ ರಥೋತ್ಸವದಲ್ಲಿ ಹುಬ್ಬಳ್ಳಿ ಸುಳ್ಳದ ಕರಿಯಮ್ಮದೇವಿ ಮಹಿಳಾ ಸಂಘದದಿಂದ ಮಹಿಳಾ ಡೊಳ್ಳು ಡೊಳ್ಳಿನ ಮೇಳ ಸೇರಿದ ಭಕ್ತ ಸಮೂಹದಲ್ಲಿ ಜನಮನ ರಂಜಿಸಿತು.
ಮುಖಂಡರಾದ ಬಸವರಾಜ ಹಿರಾಪುರ, ಈಶ್ವರ ಕುಂಕೂರ, ಶಿವಪ್ಪ ಹುಲಿಕಟ್ಟಿ, ಸಿ.ಎಂ. ಶಿರಗುಪ್ಪಿ, ಜಿ.ಸಿ. ವಾರದ, ಚನ್ನಬಸಪ್ಪ ಕೌದಿ, ಎಸ್.ಎಂ.ಅಂಗಡಿ, ಬಸವರಾಜ ಮಡಿವಾಳರ, ಸುಭಾಸ ಹಸನಿ, ಆನಂದ ನಡಕಟ್ಟನವರ, ರಾಮಪ್ಪ ಕುರಬರ, ಮಂಜುನಾಥ ದಾನೇನವರ, ಶಿವಕುಮಾರ ಮಹಾಜನಶೆಟ್ಟರ, ಈರಣ್ಣ ಗೋಣೆಪ್ಪನವರ, ಈರಣ್ಣ ಮತ್ತಿಗಟ್ಟಿ, ಪ್ರಶಾಂತ ಖಜ್ಜಿ, ಬಸವರಾಜ ಬಮ್ಮಿನಗಟ್ಟಿ ಉಪಸ್ಥಿತರಿದ್ದರು.ಇದೇ 19ರಿಂದ 21ರವರೆಗೆ ಜಂಗಿ ನಿಕಾಲಿ ಬಯಲು ಕುಸ್ತಿಗಳು ಜರುಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.