ವಿಜಯಪುರ: ವಿಶ್ವದಲ್ಲೇ ಮನುಕುಲದ ಸಮಾನತೆ ತುಡಿತ ಇರುವುದು ಭಾರತಕ್ಕೆ ಮಾತ್ರ ಎಂದು ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳೇಗೌಡ ನಾಗವಾರ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಶುಕ್ರವಾರ ನಡೆದ ‘ಅಂಬೇಡ್ಕರ್ ಮತ್ತು ಮಹಿಳೆ ಕುರಿತ’ ಕಾರ್ಯಗಾರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಅಂತರರಾಷ್ಟ್ರೀಯ ಸಮ್ಮೇಳನ ಆಯೋಜನಾ ಸಮಿತಿ, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ, ಅಹಲ್ಯಾಬಾಯಿ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅರ್ಥಶಾಸ್ತ್ರ ವಿಭಾಗ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಕೃತಿಗೂ ಹೆಚ್ಚು ಕ್ರಿಯಾತ್ಮಕವಾದ ಅವಕಾಶವನ್ನು ಭಾರತೀಯರು ಹೆಣ್ಣು ಮಕ್ಕಳಿಗೆ ಕೊಟ್ಟಿದ್ದಾರೆ. ಹೀಗಾಗಿ ಹೂವು, ನದಿಗಳಿಗೆ ಹೆಣ್ಣಿನ ಹೆಸರಿದೆ. ಸಮಾಜ ಹೆಣ್ಣನ್ನು ಶೀಲಶಂಕೆ, ಅತ್ಯಾಚಾರ, ವಿಧವೆಯರ ಕುರಿತಿರುವ ಮೌಢ್ಯತೆ, ದೌರ್ಜನ್ಯ, ನವಮಾಸಗಳಂತಹ ಪೈಶಾಚಿಕ ಕೃತ್ಯದಿಂದ ಆಗುವ ತೊಂದರೆಯನ್ನು ಸಣ್ಣ ಸಮಸ್ಯೆ ಅಲ್ಲ ಎಂದು ಅರಿತು ನಿಜವಾದ ನಾಗರಿಕತೆ ಬಯಸಿದ್ದ ಅಂಬೇಡ್ಕರ್, ಸಂವಿಧಾನದಲ್ಲಿ ಮಹಿಳೆಯರ ಏಳಿಗೆಗಾಗಿ ಕಾನೂನು ರೂಪಿಸಿದ್ದಾರೆ ಎಂದು ಹೇಳಿದರು.
ಮಹಿಳಾ ವಿ.ವಿ. ಕುಲಪತಿ ಪ್ರೊ.ಸಬಿಹಾ ಮಾತನಾಡಿ ಅಂಬೇಡ್ಕರ್ ವಿಚಾರಧಾರೆಗಳನ್ನು ಯುವ ಸಮುದಾಯಕ್ಕೆ ತಿಳಿಸುವವರ ಅವಶ್ಯವಿದೆ. ಅವರ ಸಂದೇಶ ಪುಸ್ತಕ ಓದಿ ಎನ್ನುವುದಾಗಿತ್ತು. ಅದೇ ಅವರ ಮೂಲ ಮಂತ್ರವೂ ಸಹ ಆಗಿತ್ತು.
ಇದು ಬೇರೆಯವರಿಗೆ ಹೇಳುವುದಷ್ಟೇ ಅಲ್ಲದೇ ಅವರು ಅನುಸರಿಸಿದ್ದು ಇದೇ ಮಾರ್ಗ. ಓದಿದ್ದನ್ನು ಅರಗಿಸಿಕೊಂಡು, ವಿಶ್ಲೇಷಿಸಿ ಹಂಚಿಕೊಳ್ಳಬೇಕು. ಅಂತಹ ಅನುಭವಗಳನ್ನು ಹಂಚಿಕೊಳ್ಳಲು ಈ ಕಾರ್ಯಗಾರ ವೇದಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಪರಿಶಿಷ್ಟ ಜಾತಿ/ಪಂಗಡದ ಘಟಕದ ವತಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ಅಂಗವಿಕಲ ವಿದ್ಯಾರ್ಥಿನಿಯರಿಗೆ ತ್ರಿಚಕ್ರ ವಾಹನಗಳನ್ನು ಉಚಿತವಾಗಿ ವಿತರಿಸಲಾಯಿತು.
ಪುಣೆಯ ಬಹುಜನ ಸ್ತ್ರೀವಾದಿ ಸಾಮಾಜಿಕ ಕಾರ್ಯಕರ್ತ ಲತಾ ಪಿ.ಎಂ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಂ.ಮದರಿ, ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ನಗರಿ ಬಾಬಯ್ಯ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಅಹಲ್ಯಾಬಾಯಿ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಪ್ರೊ.ಆರ್.ಸುನಂದಮ್ಮ ಸ್ವಾಗತಿಸಿದರು. ಡಾ.ಸುಕನ್ಯಾ ಹಾವನೂರ ಪರಿಚಯಿಸಿದರು. ಡಾ.ರೇಣುಕಾ ಮಂದ್ರೂಪ ನಿರೂಪಿಸಿದರು. ಡಾ.ಸಕ್ಪಾಲ್ ಹೂವಣ್ಣ ವಂದಿಸಿದರು.