ಹಿರೇಕೆರೂರ: ‘ಪಶು ಸಂಗೋಪನೆ ಆರ್ಥಿಕ ಸ್ಥಿತಿಗೆ ಅಡಿಪಾಯವಾಗಿದೆ. ರೈತರು ಕೇವಲ ಕೃಷಿಯ ಮೇಲೆ ಅವಲಂಬನೆಯಾಗದೇ ಹೈನುಗಾರಿಕೆಯಂತಹ ಪೂರಕ ಚಟುವಟಿಕೆಗಳನ್ನು ಕೈಗೊಂಡು ಅಭಿವೃದ್ಧಿ ಹೊಂದಬೇಕು’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ತಾಲ್ಲೂಕಿನ ಗುಡ್ಡದ ಮಾದಾಪುರ ಗ್ರಾಮದಲ್ಲಿ ಪಶುಪಾಲನಾ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪಶು ಚಿಕಿತ್ಸಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಪಶು ಸಂಗೋಪನಾ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಆದರೂ ಪಶುವೈದ್ಯರು ಹಾಗೂ ಸಿಬ್ಬಂದಿ ರೈತರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಬೇಕು. ಸಕಾಲದಲ್ಲಿ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು’ ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ ಮಾತನಾಡಿ, ‘ರೈತರ ಬದುಕಿಗೆ ಜಾನುವಾರುಗಳು ಜೀವನಾಡಿ ಯಾಗಿವೆ. ಸರ್ಕಾರಿ ಪಶು ಚಿಕಿತ್ಸಾಲಯ ಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿಲ್ಪಾ ನಾಗರಾಜ ಬಿಲ್ಲಳ್ಳಿ, ಉಪಾಧ್ಯಕ್ಷ ಚಂದ್ರಪ್ಪ ದಂಡಿನ, ಸದಸ್ಯರಾದ ನಾಗರಾಜ ಹೊರಟ್ಟಿ, ಶಾರದಮ್ಮ ಪೇತಕ್ಕನವರ, ಶಾಂತಾ ಅರ್ಕಾಚಾರಿ, ನೇತ್ರಾವತಿ ಮಾದರ, ಸಹಾಯಕ ನಿರ್ದೇಶಕ ಡಾ.ಕಿರಣ್ ಎಲ್., ಪ್ರದೀಪ್ ಎಂ.ಎಸ್., ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಂಜಪ್ಪ ಗಿಡ್ಡಣ್ಣನವರ, ಎಸ್.ಎಸ್.ಪೇತಕ್ಕನವರ, ಸಿದ್ದಪ್ಪ ಕರೇಗೌಡ್ರ, ರುದ್ರಗೌಡ ಕಲವೀರಕ್ಕನವರ, ಡಾ.ಉಮೇಶ ಹೊನ್ನತ್ತಿ, ಡಾ.ಯುವರಾಜ್ ಚವ್ಹಾಣ್, ಡಾ.ಪವನ್ ಬಿ.ಎಲ್., ಜಿ.ಎನ್. ಸೋಮಸುಂದರ್ ಇತರರು ಹಾಜರಿದ್ದರು.